ಚಿಂತಾಮಣಿ: ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜನರ ನಡುವೆ ಕೆಲಸ ಮಾಡಿದವರ ಸೇವೆ ಅನನ್ಯವಾದುದು ಎಂದು ಬಿಜೆಪಿ ಮುಖಂಡ ಸತ್ಯನಾರಾಯಣ ಮಹೇಶ್ ಹೇಳಿದರು.
ತಾಲ್ಲೂಕಿನ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರುಣಬಾಬು ಹಮ್ಮಿಕೊಂಡಿದ್ದ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರವೇ ಲಾಕ್ಡೌನ್ ಘೋಷಣೆ ಮಾಡಿತ್ತು. ಜನರು ಮನೆಗಳಿಂದ ಹೊರಬರಬಾರದು ಎಂದು ಸೂಚನೆ ನೀಡಿತ್ತು. ಜನರು ಭಯಭೀತರಾಗಿ ಮನೆಗಳಲ್ಲೇ ಬಂಧಿತರಾಗಿದ್ದರು. ಇಂತಹ ಸಂಕಷ್ಟ ಸಮಯದಲ್ಲಿ ಪ್ರಾಣ ಲೆಕ್ಕಿಸದೆ ಮನೆ ಮನೆಗೂ ತೆರಳಿ ಜನರ ಸಮಸ್ಯೆಗಳನ್ನು ಅರಿತು ಕಷ್ಟಪಟ್ಟಿರುವವರು ಅಭಿನಂದನೀಯ ಎಂದರು.
ಅರುಣ ಬಾಬು ಮಾತನಾಡಿ, ಬಡವರ ಕಷ್ಟಕ್ಕೆನೆರವಾದರೆ ಮನುಷ್ಯ ಜೀವನದಲ್ಲಿ ನೆಮ್ಮದಿ ಕಾಣಬಹುದು. ಕೊರೊನಾದಿಂದ ಜನಸಾಮಾನ್ಯರು ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಇದಕ್ಕಿಂತ ಭಿನ್ನವಾಗಿಲ್ಲ. ಅಂತಹ ಕುಟುಂಬಗಳಿಗೆ ಸಹಾಯ ಮಾಡುವುದು ದೇವರ ಕೆಲಸಕ್ಕೆ ಸಮಾನವಾದುದು. ಆಶಾ ಕಾರ್ಯಕರ್ತೆಯರಿಗೆ ನೆರವಾಗಲು ಜನ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಮಹೇಶ್ ಬೈ, ಮುಖಂಡರಾದ ಕುರುಬೂರು ರಾಜಣ್ಣ, ದಿಲೀಪ್, ವಾಸುದೇವ, ಅಶ್ವತ್ಥರೆಡ್ಡಿ ಇದ್ದರು.