<p><strong>ಚೇಳೂರು</strong>: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಪಲ್ಲಿ- ರಾಚವಾರಪಲ್ಲಿ ಸಂಪರ್ಕ ರಸ್ತೆಗೆ ಡಾಂಬರು ಭಾಗ್ಯವಿಲ್ಲದ ಕಾರಣ ಕುರುಬರಪಲ್ಲಿ ಹಾಗೂ ಚಿನ್ನಗಾನಪಲ್ಲಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.</p>.<p>ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಂತೆ ಈ ರಸ್ತೆ ಗೋಚರಿಸುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಕುರುಬರಪಲ್ಲಿ ಗ್ರಾಮದಿಂದ ಚಿನ್ನಗಾನಪಲ್ಲಿ ಗ್ರಾಮದವರೆಗಿನ ರಸ್ತೆಯನ್ನು ದುರಸ್ತಿ ಮಾಡುವ ನೆಪದಲ್ಲಿ ಅಧಿಕಾರಿಗಳು ಸುಮಾರು 5 ವರ್ಷಗಳ ಹಿಂದೆ ರಸ್ತೆಯನ್ನು ಅಗೆದು, ಜಲ್ಲಿಕಲ್ಲು ಸುರಿದು ಹೋಗಿದ್ದರು. ಆದರೆ, ಕಾಮಗಾರಿ ಆರಂಭವಾಗಿ ಅರ್ಧ ದಶಕ ಉರುಳಿದರೂ ಅಧಿಕಾರಿಗಳು ಮಾತ್ರ ಇತ್ತ ಮುಖ ಮಾಡಿಲ್ಲ. ಅರ್ಧಕ್ಕೆ ನಿಂತಿರುವ ಈ ಕಾಮಗಾರಿಯಿಂದಾಗಿ ರಸ್ತೆಯುದ್ದಕ್ಕೂ ಚೂಪಾದ ಜಲ್ಲಿಕಲ್ಲುಗಳು ಎದ್ದು ನಿಂತಿವೆ. ಇದು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.</p>.<p>ಚಿನ್ನಗಾನಪಲ್ಲಿ ಗ್ರಾಮದಿಂದ ರಾಚವಾರಪಲ್ಲಿ ಮುಖ್ಯ ರಸ್ತೆಯವರೆಗಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಪೂರ್ಣವಾಗಿ ಡಾಂಬರು ಕಿತ್ತು ಹೋಗಿದೆ. ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರುತಿಸುವುದೇ ಕಷ್ಟವಾಗಿದೆ. ಬೃಹತ್ ಗಾತ್ರದ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಅದೆಷ್ಟೋ ಅಪಘಾತಗಳು ಸಂಭವಿಸಿವೆ. ಗರ್ಭಿಣಿಯರು, ವೃದ್ಧರು ಹಾಗೂ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಭೀತಿಪಡುವಂತಾಗಿದೆ. ತೇಪೆ ಹಾಕುವ ಕನಿಷ್ಠ ಸೌಜನ್ಯವನ್ನೂ ಲೋಕೋಪಯೋಗಿ ಇಲಾಖೆ ತೋರುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ.</p>.<p>ಸಾಮಾನ್ಯವಾಗಿ 5 ಕಿಲೋಮೀಟರ್ ದೂರವನ್ನು ಕ್ರಮಿಸಲು ವಾಹನಗಳಲ್ಲಿ ಗರಿಷ್ಠ 10 ರಿಂದ 15 ನಿಮಿಷ ಸಾಕು. ಆದರೆ, ಈ ನರಕಸದೃಶ ರಸ್ತೆಯಲ್ಲಿ ಕೇವಲ 5 ಕಿಲೋಮೀಟರ್ ಪ್ರಯಾಣಿಸಲು ಬರೋಬ್ಬರಿ ಒಂದು ಗಂಟೆ ಸಮಯ ಹಿಡಿಯುತ್ತಿದೆ. ಗುಂಡಿ ಹಾಗೂ ಜಲ್ಲಿಕಲ್ಲುಗಳಿಂದಾಗಿ ನಿತ್ಯವೂ ವಾಹನಗಳ ಟೈರ್ ಪಂಕ್ಚರ್ ಆಗುವುದು, ಎಂಜಿನ್ ಕೆಡುವುದು ಸಾಮಾನ್ಯವಾಗಿದೆ. ಕೆಲಸ ಕಾರ್ಯಗಳಿಗೆ, ಕಚೇರಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹೋಗುವವರು ಸಕಾಲಕ್ಕೆ ತಲುಪಲಾಗದೆ ನಿತ್ಯವೂ ಪರದಾಡುತ್ತಿದ್ದಾರೆ.</p>.<p>ಚುನಾವಣೆ ಬಂದಾಗ ಮತ ಕೇಳಲು ಸಾಲು ಸಾಲಾಗಿ ಬರುವ ಜನಪ್ರತಿನಿಧಿಗಳು, ಗೆದ್ದ ನಂತರ ಇತ್ತ ತಲೆಹಾಕಿಯೂ ಮಲಗುತ್ತಿಲ್ಲ. ಗ್ರಾಮಸ್ಥರು ಹಲವು ಬಾರಿ ಮನವಿ ನೀಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ವ್ಯವಸ್ಥೆಯ ಈ ಉದಾಸೀನ ಧೋರಣೆ ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.</p>.<p>ಕೂಡಲೇ ಕುರುಬರಪಲ್ಲಿ - ರಾಚವಾರಪಲ್ಲಿ ಸಂಪರ್ಕ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸಂಪೂರ್ಣ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಒಟ್ಟಾಗಿ ರಸ್ತೆ ತಡೆ ನಡೆಸಿ, ಉಗ್ರ ಹೋರಾಟ ಮಾಡುವುದಾಗಿ ಹಾಗೂ ಮುಂಬರುವ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೇಳೂರು</strong>: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಪಲ್ಲಿ- ರಾಚವಾರಪಲ್ಲಿ ಸಂಪರ್ಕ ರಸ್ತೆಗೆ ಡಾಂಬರು ಭಾಗ್ಯವಿಲ್ಲದ ಕಾರಣ ಕುರುಬರಪಲ್ಲಿ ಹಾಗೂ ಚಿನ್ನಗಾನಪಲ್ಲಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.</p>.<p>ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಂತೆ ಈ ರಸ್ತೆ ಗೋಚರಿಸುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಕುರುಬರಪಲ್ಲಿ ಗ್ರಾಮದಿಂದ ಚಿನ್ನಗಾನಪಲ್ಲಿ ಗ್ರಾಮದವರೆಗಿನ ರಸ್ತೆಯನ್ನು ದುರಸ್ತಿ ಮಾಡುವ ನೆಪದಲ್ಲಿ ಅಧಿಕಾರಿಗಳು ಸುಮಾರು 5 ವರ್ಷಗಳ ಹಿಂದೆ ರಸ್ತೆಯನ್ನು ಅಗೆದು, ಜಲ್ಲಿಕಲ್ಲು ಸುರಿದು ಹೋಗಿದ್ದರು. ಆದರೆ, ಕಾಮಗಾರಿ ಆರಂಭವಾಗಿ ಅರ್ಧ ದಶಕ ಉರುಳಿದರೂ ಅಧಿಕಾರಿಗಳು ಮಾತ್ರ ಇತ್ತ ಮುಖ ಮಾಡಿಲ್ಲ. ಅರ್ಧಕ್ಕೆ ನಿಂತಿರುವ ಈ ಕಾಮಗಾರಿಯಿಂದಾಗಿ ರಸ್ತೆಯುದ್ದಕ್ಕೂ ಚೂಪಾದ ಜಲ್ಲಿಕಲ್ಲುಗಳು ಎದ್ದು ನಿಂತಿವೆ. ಇದು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.</p>.<p>ಚಿನ್ನಗಾನಪಲ್ಲಿ ಗ್ರಾಮದಿಂದ ರಾಚವಾರಪಲ್ಲಿ ಮುಖ್ಯ ರಸ್ತೆಯವರೆಗಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಪೂರ್ಣವಾಗಿ ಡಾಂಬರು ಕಿತ್ತು ಹೋಗಿದೆ. ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರುತಿಸುವುದೇ ಕಷ್ಟವಾಗಿದೆ. ಬೃಹತ್ ಗಾತ್ರದ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಅದೆಷ್ಟೋ ಅಪಘಾತಗಳು ಸಂಭವಿಸಿವೆ. ಗರ್ಭಿಣಿಯರು, ವೃದ್ಧರು ಹಾಗೂ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಭೀತಿಪಡುವಂತಾಗಿದೆ. ತೇಪೆ ಹಾಕುವ ಕನಿಷ್ಠ ಸೌಜನ್ಯವನ್ನೂ ಲೋಕೋಪಯೋಗಿ ಇಲಾಖೆ ತೋರುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ.</p>.<p>ಸಾಮಾನ್ಯವಾಗಿ 5 ಕಿಲೋಮೀಟರ್ ದೂರವನ್ನು ಕ್ರಮಿಸಲು ವಾಹನಗಳಲ್ಲಿ ಗರಿಷ್ಠ 10 ರಿಂದ 15 ನಿಮಿಷ ಸಾಕು. ಆದರೆ, ಈ ನರಕಸದೃಶ ರಸ್ತೆಯಲ್ಲಿ ಕೇವಲ 5 ಕಿಲೋಮೀಟರ್ ಪ್ರಯಾಣಿಸಲು ಬರೋಬ್ಬರಿ ಒಂದು ಗಂಟೆ ಸಮಯ ಹಿಡಿಯುತ್ತಿದೆ. ಗುಂಡಿ ಹಾಗೂ ಜಲ್ಲಿಕಲ್ಲುಗಳಿಂದಾಗಿ ನಿತ್ಯವೂ ವಾಹನಗಳ ಟೈರ್ ಪಂಕ್ಚರ್ ಆಗುವುದು, ಎಂಜಿನ್ ಕೆಡುವುದು ಸಾಮಾನ್ಯವಾಗಿದೆ. ಕೆಲಸ ಕಾರ್ಯಗಳಿಗೆ, ಕಚೇರಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹೋಗುವವರು ಸಕಾಲಕ್ಕೆ ತಲುಪಲಾಗದೆ ನಿತ್ಯವೂ ಪರದಾಡುತ್ತಿದ್ದಾರೆ.</p>.<p>ಚುನಾವಣೆ ಬಂದಾಗ ಮತ ಕೇಳಲು ಸಾಲು ಸಾಲಾಗಿ ಬರುವ ಜನಪ್ರತಿನಿಧಿಗಳು, ಗೆದ್ದ ನಂತರ ಇತ್ತ ತಲೆಹಾಕಿಯೂ ಮಲಗುತ್ತಿಲ್ಲ. ಗ್ರಾಮಸ್ಥರು ಹಲವು ಬಾರಿ ಮನವಿ ನೀಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ವ್ಯವಸ್ಥೆಯ ಈ ಉದಾಸೀನ ಧೋರಣೆ ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.</p>.<p>ಕೂಡಲೇ ಕುರುಬರಪಲ್ಲಿ - ರಾಚವಾರಪಲ್ಲಿ ಸಂಪರ್ಕ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸಂಪೂರ್ಣ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಒಟ್ಟಾಗಿ ರಸ್ತೆ ತಡೆ ನಡೆಸಿ, ಉಗ್ರ ಹೋರಾಟ ಮಾಡುವುದಾಗಿ ಹಾಗೂ ಮುಂಬರುವ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>