ಚಿಕ್ಕಬಳ್ಳಾಪುರ: ‘ಟಿಪ್ಪು ನಿಜ ಕನಸುಗಳು’ ಕೃತಿ ನಿಷೇಧಿಸುವಂತೆ ಮತ್ತು ನಾಟಕ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಬೆಂಗಳೂರು ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ವಾಪಸ್ ಪಡೆದಿದ್ದೇವೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಬಿ.ಎಸ್.ರಫೀವುಲ್ಲಾ ಹೇಳಿದ್ದಾರೆ.
ದಾವೆ ವಾಪಸ್ ಪಡೆದ ಕುರಿತು ಗುರುವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯ ಆಡಳಿತದಲ್ಲಿ ನಮಗೆ ಯಾವ ವ್ಯವಸ್ಥೆ ಬಗ್ಗೆಯೂ ಭರವಸೆ ಉಳಿದಿಲ್ಲ. ಇಲ್ಲಿ ನಮ್ಮದೇನು ನಡೆಯುತ್ತದೆ? ಯಾರೂ ಸಹ ನಮ್ಮ ಧ್ವನಿ ಕೇಳುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ರಕ್ಷಣೆ ಮತ್ತು ಭರವಸೆ ಇಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ನಮ್ಮ ಸಮಯ, ಹಣ ವ್ಯಯವಾಗುತ್ತದೆ ಅಷ್ಟೆ’ ಎಂದರು.
‘ಲಕ್ಷಾಂತರ ರೂಪಾಯಿ ಹಣವನ್ನು ವಕೀಲರಿಗೆ ಶುಲ್ಕ ನೀಡಿ ವಾದ ಮಾಡಬೇಕಾಗಿದೆ. ನಮ್ಮ ಬೆಂಬಲಕ್ಕೆ ಯಾವುದೇ ಸಂಘ– ಸಂಸ್ಥೆಗಳು ಇಲ್ಲ. ನಮಗೆ ಬಂಡವಾಳ ಹೂಡುವವರು ಯಾರೂ ಇಲ್ಲ. ಅವರಿಗೆ ಸಂಘ ಪರಿವಾರ, ಸರ್ಕಾರದಿಂದ ಹಣ ಬರುತ್ತದೆ. ನ್ಯಾಯಾಲಯಕ್ಕೆ ಬಂದಾಗ ಅವರ ಜತೆ ಎಂಟು ವಕೀಲರು ಇದ್ದರು’ ಎಂದರು.