ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಸಾಹಿತಿ ಎಲ್.ಬಸವರಾಜು ಸಾಹಿತ್ಯ ಸ್ಮರಣೆ

‘ಇಡಗೂರು ಬೆಳಕು’ ಪುಸ್ತಕ ಬಿಡುಗಡೆ
Last Updated 24 ಅಕ್ಟೋಬರ್ 2021, 5:24 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಇಡಗೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಾಡೋಜ ಡಾ.ಎಲ್. ಬಸವರಾಜು ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂಸ್ಕೃತಿ ಚಿಂತಕ ಪ್ರೊ.ಕೋಡಿರಂಗಪ್ಪ ಮಾತನಾಡಿ, ಡಾ.ಎಲ್. ಬಸವರಾಜು ದಶಕಗಳ ಹಿಂದೆಯೇ ಕನ್ನಡ ನಾಡು ಮತ್ತು ನುಡಿಗೆ ಸಾಕಷ್ಟು ಸೇವೆ ಮಾಡಿದ್ದಾರೆ. ಕುಗ್ರಾಮದಲ್ಲಿ ಹುಟ್ಟಿ ನಾಡಿನಾದ್ಯಂತ ಸಾಹಿತ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎಂದರು.

ಅವರು ಕೇವಲ ಕನ್ನಡ ಭಾಷೆಯನ್ನಾಧರಿಸಿದ ಕೃತಿಗಳ ರಚನೆಯಲ್ಲದೆ ವಿವಿಧ ಭಾಷೆಯಲ್ಲಿನ ಕವನ ಮತ್ತು ಗ್ರಂಥಗಳನ್ನು ಭಾಷಾಂತರ ಮಾಡುವ ಕೌಶಲ ಹೊಂದಿದ್ದರು. ಅವರು ರಚಿಸಿರುವ ಗ್ರಂಥಗಳು ಮತ್ತು ಪುಸ್ತಕಗಳನ್ನು ತಾಲ್ಲೂಕು ಮಟ್ಟದ ಪ್ರತಿ ಗ್ರಂಥಾಲಯ, ಶಾಲಾ, ಕಾಲೇಜುಗಳಲ್ಲಿನ ವಾಚನಾಲಯದಲ್ಲಿ‌ ಇಡುವುದರಿಂದ ಅವರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಇಂದಿನ ಯುವಜನತೆಗೆ ಅವರ ಆದರ್ಶ ಜೀವನ ದಾರಿದೀಪವಾಗಬೇಕಾಗಿದೆ ಎಂದು ಹೇಳಿದರು.

ಚಿಂತಕ ಪ್ರೊ.ಬಿ. ಗಂಗಾಧರಮೂರ್ತಿ ಮಾತನಾಡಿ, ಸಮಾಜದಲ್ಲಿನ ಸಾಕಷ್ಟು ಶೋಷಣೆಯ ನಡುವಿನಲ್ಲಿ ಹುಟ್ಟಿ ಬೆಳೆದು ಸಾಧನೆ ಮಾಡಿದಂತಹ ಮಹಾನ್ ವ್ಯಕ್ತಿಗಳಲ್ಲಿ ಬಸವರಾಜು ಒಬ್ಬರಾಗಿದ್ದಾರೆ. ಅವರು ಈ ತಾಲ್ಲೂಕಿನವರು ಎಂದು ಹೇಳಿಕೊಳ್ಳುವುದೇ ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.

ಇಂತಹ ಮಹಾನ್ ಚೇತನವನ್ನು ಸ್ಮರಿಸುವ ನಿಟ್ಟಿನಲ್ಲಿ ಅವರು ಓದಿ, ಆಡಿ ಬೆಳೆದಂತಹ ಶಾಲೆಯಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಇಂತಹ ಸತ್ಕಾರ್ಯಗಳು ಆ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ನೀಡುವ ಜತೆಗೆ ಎಲ್ಲರ ಬದುಕಿಗೆ ಮಾದರಿಯಾಗುತ್ತವೆ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ನಗರದ ಡಾ.ಎಚ್‌.ಎನ್. ವೃತ್ತದ ಇಡಗೂರು- ಗೌರಿಬಿದನೂರು ರಸ್ತೆಗೆ ಬಸವರಾಜು ಅವರ ಹೆಸರಿನ ನಾಮಫಲಕದ ಅನಾವರಣ ಮಾಡಿದರು. ಬಳಿಕ ಬಸವರಾಜು ಅವರ ಭಾವಚಿತ್ರ ಒಳಗೊಂಡ ಪಲ್ಲಕ್ಕಿಯೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಮುಖ್ಯವೃತ್ತದಲ್ಲಿ ಡಾ.ಎಲ್. ಬಸವರಾಜು ಅವರ ಪುತ್ಥಳಿ ಅನಾವರಣದ ಜತೆಗೆ ಹೈಮಾಸ್ಕ್ ದೀಪ ಉದ್ಘಾಟಿಸಲಾಯಿತು.

ಆರ್. ವೀರಣ್ಣ ಅವರು ಬರೆದ ಬಸವರಾಜು ಅವರ ಜೀವನವನ್ನಾಧರಿಸಿದ ‘ಇಡಗೂರು ಬೆಳಕು’ ಪುಸ್ತಕವನ್ನು‌ ಬಿಡುಗಡೆ ಮಾಡಿದರು. ನೆಚ್ಚಿನ ಕವಿಯ‌ ಜನ್ಮ ಶತಮಾನೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ರೆಡ್‌ಕ್ರಾಸ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಒಟ್ಟು 34 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ವೇದಿಕೆಯಲ್ಲಿ ಗ್ರಾ‌.ಪಂ ಅಧ್ಯಕ್ಷ ಜಯರಾಮಯ್ಯ, ಉಪಾಧ್ಯಕ್ಷೆ ಮಂಜುಳಾ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ. ರವೀಂದ್ರನಾಥ್, ಬಿಇಒ ಕೆ.ವಿ. ಶ್ರೀನಿವಾಸಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ವೈ.ಟಿ. ಪ್ರಸನ್ನಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ದತ್ತಗುರು ಎಸ್. ಹೆಗ್ಗಡೆ, ಮುಖ್ಯಶಿಕ್ಷಕರಾದ ಇ‌. ಸಿದ್ದೇಶ್ವರ, ಆದಿನಾರಾಯಣಪ್ಪ, ಆಚರಣಾ ಸಮಿತಿ ಸದಸ್ಯರಾದ ಎಲ್. ನಾಗರಾಜು, ಉಮಾಶಂಕರ್, ಆರ್. ವೀರಣ್ಣ, ಮುಖಂಡರಾದ ಎಚ್‌.ಎನ್. ಪ್ರಕಾಶ ರೆಡ್ಡಿ, ಪ್ರೊ.ಕೆ.ವಿ. ಪ್ರಕಾಶ್, ತಳಗವಾರ, ಸೋಮಶೇಖರಗೌಡ, ನರಸಿಂಹಮೂರ್ತಿ, ಜಕ್ಕೇನಹಳ್ಳಿ ಆರ್. ವೆಂಕಟಾಚಲ, ಕೃಷ್ಣಕುಮಾರಿ, ಎ.ಬಿ. ಶೈಲಜಾ‌ ಸಪ್ತಗಿರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT