ಚಿಕ್ಕಬಳ್ಳಾಪುರ: ‘ದೀರ್ಘಕಾಲದ ಸೈದ್ಧಾಂತಿಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರಿಗೆ ಗೌರವ ಸೂಚಿಸುವ ಜತೆಗೆ ಅವರು ಹೊಂದ್ದಿದ ಆಶಯಗಳನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ’ ಎಂದು ಕ್ರೈಸ್ತ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಜಿ.ವಿನ್ಸೆಂಟ್ ಹೇಳಿದರು.
ನಗರದಲ್ಲಿ ಕ್ರೈಸ್ತ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ ವಯೋವೃದ್ದರಿಗೆ ಉಚಿತ ಬೆಡ್ ಶೀಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಭವಿಷ್ಯವು ಮಕ್ಕಳ ಬೆಳವಣಿಗೆಯನ್ನೇ ಆಧರಿಸಿದೆ. ಆದ್ದರಿಂದ ಯುವಜನರು ಸಮರ್ಥ ನಾಯಕರಾಗಿ ರೂಪುಗೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ’ ಎಂದು ತಿಳಿಸಿದರು.
ಕಾರ್ಮಿಕ ಸೇವಾ ಸಂಘ ಜಿಲ್ಲಾ ಘಟಕದ ಧ್ಯಕ್ಷ ಜಿ.ಎನ್.ರವಿಪ್ರಕಾಶ್ ಮಾತನಾಡಿ, ‘ಕೊರೊನಾ ಲಾಕ್ಡೌನ್ ಪರಿಣಾಮ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ. ಬಹಳಷ್ಟು ಕಂಪನಿಗಳು ಆರ್ಥಿಕ ನಷ್ಟಕ್ಕೆ ಗುರಿಯಾಗಿ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆವೆ. ಸ್ವಾತಂತ್ರ್ಯ ಬಂದು 74 ವರ್ಷ ಕಳೆದರೂ ಕಾರ್ಮಿಕರು ಇಂದಿಗೂ ತಮ್ಮ ಹಕ್ಕುಗಳಿಗೆ ಹೋರಾಡುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ’ ಎಂದರು.
ವೇದಿಕೆಯ ಉಪಾಧ್ಯಕ್ಷರಾದ ಮಹೇಶ್ ಕುಮಾರ್, ಸ್ಟೀಫನ್ ರಾಬಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ಸಹಕಾರ್ಯದರ್ಶಿ ಕೆ.ಅಶೋಕ್, ಖಜಾಂಚಿ ಎಂ.ವೆಂಕಟೇಶ್, ಸಂಚಾಲಕ ಲೋಕ ಗಂಗಣ್ಣ, ತಿಪ್ಪಣ್ಣ, ಸತೀಶ್ ಕುಮಾರ್, ಆನಂದ್ ಕುಮಾರ್ ಇದ್ದರು.