ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿಯ ಸದಸ್ಯ ನವೀನ್ ಮಾತನಾಡಿ, ‘ಹತ್ತು ವರ್ಷಗಳಿಂದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಹೋರಾಟ ಸಮಿತಿಯಿಂದ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಗಮನಕ್ಕೂ ತರಲಾಗಿದೆ. ಅವರು ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು. ಪಟ್ಟಣದ ಅಮಾನಿಬೈರಸಾಗರ ಕೆರೆಯ ಬಳಿ ಸರ್ವೆ ನಂಬರ್ 3ರಲ್ಲಿ 6 ಎಕರೆ ಜಮೀನು ಕ್ರೀಡಾಂಗಣಕ್ಕಾಗಿ ಜಿಲ್ಲಾಧಿಕಾರಿ ಅವರಿಗೆ ಕಡತ ಸಲ್ಲಿಸಲಾಗಿದೆ. ಆದರೆ, ಆರು ತಿಂಗಳಾದರೂ ಅನುಮತಿ ನೀಡದೇ ಇರುವುದರಿಂದ ಪತ್ರ ಕಳುಹಿಸುವ ಚಳವಳಿ ಪ್ರಾರಂಭ ಮಾಡಿದ್ದೇವೆ’ ಎಂದು ತಿಳಿಸಿದರು.