ಚಿಕ್ಕಬಳ್ಳಾಪುರ: ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಅಹವಾಲುಗಳ ಬದಲು ‘ಕೊರತೆ’ಯ ದರ್ಶನವಾಯಿತು.
ಲೋಕಾಯುಕ್ತ ಡಿವೈಎಸ್ಪಿ ಮೋಹನ್, ಇನ್ಸ್ಪೆಕ್ಟರ್ ಹರೀಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆರಳೆಣಿಕೆ ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿದ್ದರು. ಅಧಿಕಾರಿಗಳು, ಸಾರ್ವಜನಿಕರು ಇಲ್ಲದೇ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದ ಸಭೆಯಲ್ಲಿ ಕೇಳಿ ಬಂದಿದ್ದು ಒಂದೇ ಒಂದು ಅಹವಾಲು! ಪರಿಣಾಮ, ಸಭೆ ಆರಂಭಗೊಂಡ ಬರೀ 20 ನಿಮಿಷಗಳಲ್ಲಿಯೇ ಸಮಾಪ್ತಿಯಾಯಿತು.