ಚಿಕ್ಕಬಳ್ಳಾಪುರ: ‘ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಅಡಿಯಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸುವಂತೆ ಅಧಿಕಾರಿಗಳು ಪ್ರೆರೇಪಿಸಬೇಕು. ಬ್ಯಾಂಕ್ ಸಿಬ್ಬಂದಿ ಕೂಡ ರೈತರಿಗೆ ಸಹಕಾರ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಬೆಳೆಗಳ ಬಗೆಗಿನ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಬೆಳೆಗಳಿಗೆ ವಿಮೆ ಮಾಡಿಸಿದರೆ ನೈಸರ್ಗಿಕ ವಿಪತ್ತುಗಳಿಂದ ಬೆಳೆಗಳಿಗೆ ನಷ್ಟವಾದಾಗ ವಿಮೆಯಿಂದ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳು ರೈತರಿಗೆ ತಿಳುವಳಿಕೆ ಮೂಡಿಸಬೇಕು. ಬಿತ್ತನೆ ವಿಫಲಗೊಂಡಾಗ ಮತ್ತು ಕಟಾವು ಹಂತದಲ್ಲಿ ಬೆಳೆ ನಷ್ಟವಾದರೆ ರೈತರಿಗೆ ವಿಮಾ ಮೊತ್ತದ ಗರಿಷ್ಠ ಶೇ 25 ರಷ್ಟು ಪರಿಹಾರ ಸಿಗಲಿದೆ ಈ ಬಗ್ಗೆ ತಿಳುವಳಿಕೆ ಮೂಡಿಸಿ’ ಎಂದು ತಿಳಿಸಿದರು.
‘ರೈತರು ಒಂದೇ ಪಹಣಿಯಲ್ಲಿರುವ ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳಿಗೆ ಅನುಸಾರವಾಗಿ ವಿಮೆ ಮಾಡಿಸಬಹುದಾಗಿದೆ. ಇದರಿಂದ ಈಗಾಗಲೇ ತೊಂದರೆ ಉಂಟಾದ ರೈತರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಮಿಶ್ರ ಬೇಸಾಯಕ್ಕೆ ಉತ್ತೇಜನ ನೀಡಬೇಕು’ ಎಂದು ಸೂಚಿಸಿದರು.
‘ಬೆಳೆ ಸಾಲದ ಅನುಕೂಲಗಳ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಲು ಹೆಚ್ಚಿನ ಪ್ರಚಾರವನ್ನು ಕೈಗೊಳ್ಳಬೇಕು’ ಎಂದರು.
ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪಾ, ಉಪನಿರ್ದೇಶಕಿ ಅನುರೂಪಾ, ಲೀಡ್ ಬಾಂಕ್ ವ್ಯವಸ್ಥಾಪಕ ಬಸವರಾಜು, ತಾಲ್ಲೂಕಿನ ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು ಸಭೆಯಲ್ಲಿ ಹಾಜರಿದ್ದರು.