ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಯಲ್ಲಿ ಹೂಳು; ಮುಗಿಯುತ್ತಿಲ್ಲ ಗೋಳು

ಸರಾಗವಾಗಿ ನೀರು ಹರಿಯದೆ ನಗರದ ಅನೇಕ ವಾರ್ಡ್‌ಗಳಲ್ಲಿ ಮಡುಗಟ್ಟಿದ ಕಾಲುವೆಗಳು, ಸಮಸ್ಯೆಗಳಿಂದ ಹೈರಾಣಾದ ಜನರು
Last Updated 23 ಜೂನ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಯ್ಯೋ ಚರಂಡಿದಾ, ಅದೇನಂತಾ ಕೇಳ್ತಿರಾ? ಎಷ್ಟು ಸಾರಿ ಕೇಳಿದ್ದೀರಿ. ನಾವು ಎಷ್ಟು ಗೋಳಾಡಿದರೂ ಅಷ್ಟೇ. ಡಿ.ಸಿ, ಎ.ಸಿ, ಯಾರೂ ಬಂದ್ರೂ ನಮ್ಮ ಪಾಡಂತೂ ತಪ್ಪಲಿಲ್ಲ. ಈ ಕಷ್ಟ ನಮ್ಮ ಶತ್ರುಗಳಿಗೂ ಬೇಡಪ್ಪಾ’.. ಎಂದು ಒಂದೇ ಉಸಿರಿಗೆ ತಮ್ಮ ಮನದಾಳದಲ್ಲಿ ಅಡಗಿದ ನೋವು ಹೊರಹಾಕಿದರು ಜಿಲ್ಲಾ ಆಸ್ಪತ್ರೆ ಮುಂಭಾಗದ ರಸ್ತೆ ನಿವಾಸಿ ಪದ್ಮಮ್ಮ.

ನಗರದ ಹದಗೆಟ್ಟ ಚರಂಡಿ ವ್ಯವಸ್ಥೆಯ ಬೆನ್ನು ಹತ್ತಿ ಒಂದು ಸುತ್ತು ಹಾಕಿದರೆ ಅನೇಕ ಕಡೆಗಳಲ್ಲಿ ಇಂತಹ ಅಮ್ಮಂದಿರ ವ್ಯಥೆಗಳ ಕಥೆಗಳು ಕೇಳಲು ಸಿಗುತ್ತವೆ. ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ದಶಕ ಕಳೆದಿದೆ. ಆದರೆ ಇಂದಿಗೂ ಜಿಲ್ಲಾ ಕೇಂದ್ರವಾದ ನಗರದ ಅನೇಕ ವಾರ್ಡ್‌ಗಳಲ್ಲಿನ ಚರಂಡಿ ವ್ಯವಸ್ಥೆ ನೋಡಿದರೆ ನಾಗರಿಕರು ಅನುಭವಿಸುವ ಪಾಡಿಗೆ ಮರುಕ ಉಂಟಾಗುತ್ತದೆ.

ಅವೈಜ್ಞಾನಿಕ ಕಾಮಗಾರಿ, ಸ್ವಚ್ಛತೆ ನಿರ್ವಹಣೆ ಕೊರತೆ, ಅಧಿಕಾರಿಗಳ ಅಸಡ್ಡೆ, ನಾಗರಿಕರ ಬೇಜವಾಬ್ದಾರಿತನ.. ಹೀಗೆ ಹತ್ತು ಹಲವು ಸಮಸ್ಯೆಗಳು ಮೆಳೈಸಿ ದಶಕ ಪೂರೈಸಿದ ಜಿಲ್ಲಾ ಕೇಂದ್ರವನ್ನು ಅಂದಗಾಣಲು, ಶುಚಿಯಾಗಲು ಬಿಡುತ್ತಲೇ ಇಲ್ಲ.

ಸದಾ ಹೂಳು, ಕೊಚ್ಚೆ ನೀರಿನಿಂದಲೇ ತುಂಬಿ ನಿಂತಿರುವ ಚರಂಡಿಗಳು ಸ್ವಲ್ಪ ಮಳೆ ಸುರಿದರೂ ಸ್ಥಳೀಯರನ್ನು ಗೋಳಾಡಿಸದೆ ಬಿಡುವುದಿಲ್ಲ. ಜೋರಾಗಿ ಮಳೆ ಸುರಿದಂತೂ ಕೆಲವೆಡೆ ಬಣ್ಣಿಸಲಾಗದಷ್ಟು ಕೆಟ್ಟ ಪರಿಸ್ಥಿತಿ. ಕೆಲವೆಡೆ ಸಾಂಕ್ರಾಮಿಕ ರೋಗ ಭೀತಿ ಕಾಯಂ ಅತಿಥಿ. ಹೀಗಾಗಿ, ಸೊಳ್ಳೆ ಕಾಟಕ್ಕೆ ಮನೆ ಕಿಟಕಿ, ಬಾಗಿಲು ತೆರೆಯಲು ಜನ ಅಂಜುವ ಸ್ಥಿತಿ.

ಮಳೆಗಾಲಕ್ಕೂ ಮುನ್ನ ನಗರದ ಚರಂಡಿ, ಕಾಲುವೆಗಳನ್ನು ಸ್ವಚ್ಛಗೊಳಿಸಿ, ಸುಸಜ್ಜಿತವಾಗಿಡುವ ಕೆಲಸವನ್ನು ನಗರಸಭೆ ಎಂದೋ ಮರತಾಗಿದೆ ಎನ್ನುವುದು ನಗರವಾಸಿಗಳ ದೂರು. ಇದರ ಪರಿಣಾಮ ಎನ್ನುವಂತೆ, ವರ್ಷದಿಂದ ವರ್ಷಕ್ಕೆ ನಗರದಲ್ಲಿ ಅನೇಕ ಕಡೆಗಳಲ್ಲಿ ಚರಂಡಿಗಳು ಹೂಳಿನಿಂದ ಮುಚ್ಚಿವೆ. ಜೋರಾಗಿ ಮಳೆ ಸುರಿದರೆ ಕ್ಷಣ ಮಾತ್ರದಲ್ಲಿ ಪ್ರವಾಹ ಸನ್ನಿವೇಶ ಸೃಷ್ಟಿಸುತ್ತವೆ. ತಗ್ಗು ಪ್ರದೇಶಗಳ ಜನರ ಪಾಡು ದೇವರಿಗೆ ಪ್ರೀತಿ!

ನಗರಸಭೆಯ ವ್ಯಾಪ್ತಿಯ 31 ವಾರ್ಡ್‌ಗಳ ಪೈಕಿ ಯಾವುದೇ ವಾರ್ಡ್‌ಗೆ ಹೋದರೂ ಸ್ವಚ್ಛವಾಗಿರುವ ಚರಂಡಿ ಕಾಣುವುದು ಅಪರೂಪ ಎನ್ನುವಂತಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ಚರಂಡಿಗಳು ಬಾಯಿ ಹೊಲಿದುಕೊಂಡು, ಸತ್ತು ಮಲಗಿದಂತಿವೆ. ಕಾಲ ಕಾಲಕ್ಕೆ ಹೂಳೆತ್ತಿ ಮಳೆ ನೀರಿಗೆ ಸರಾಗ ಹರಿವು ಕಲ್ಪಿಸಿಕೊಡಬೇಕಾದವರು ತಮ್ಮ ಕರ್ತವ್ಯ ಮರೆತಿದ್ದಾರೆ ಎನ್ನುವುದು ಸಾರ್ವಜನಿಕರ ಆಕ್ರೋಶ ಭರಿತ ಆರೋಪ.

ನಗರದಲ್ಲಿ ಪ್ರಮುಖವಾಗಿ 3ನೇ ವಾರ್ಡ್‌ (ದರ್ಗಾ ಮೊಹಲ್ಲಾ), 4ನೇ ವಾರ್ಡ್ (ಪ್ರಶಾಂತ್‌ ನಗರ, ಭಗತ್‌ ಸಿಂಗ್ ನಗರ), 5ನೇ ವಾರ್ಡ್‌ (ದಿನ್ನೆ ಹೊಸಹಳ್ಳಿ ರಸ್ತೆ), 8ನೇ ವಾರ್ಡ್‌ (ಜೈಭೀಮ್ ನಗರ, ಜಿಲ್ಲಾ ಆಸ್ಪತ್ರೆ ಮುಂಭಾಗದ ಪ್ರದೇಶ), 21ನೇ ವಾರ್ಡ್‌ (ನಕ್ಕಲಕುಂಟೆ) ಸೇರಿದಂತೆ ಹತ್ತಾರು ಕಡೆಗಳಲ್ಲಿ ಅಸ್ತವ್ಯಸ್ತ ಸ್ಥಿತಿಯಲ್ಲಿರುವುದು ಗೋಚರಿಸುತ್ತದೆ.

ನಗರದ ಎಂಟನೇ ವಾರ್ಡ್‌ನಲ್ಲಿ ಹೊಸ ಜಿಲ್ಲಾ ಆಸ್ಪತ್ರೆ ಮುಂದಿನ ಪ್ರದೇಶದಲ್ಲಿರುವ ಬಿರು ಬೇಸಿಗೆಯಲ್ಲೂ ತುಂಬಿ ನಿಂತ ಚರಂಡಿಗಳು ಗೋಚರಿಸುತ್ತವೆ. ವರ್ಷವಿಡೀ ಮಡುಗಟ್ಟಿದ ಸ್ಥಿತಿಯಲ್ಲೇ ಇರುವ ಅಧ್ವಾನಗೊಂಡ ಕಾಲುವೆಗಳಲ್ಲಿ ಸದಾ ದುರ್ವಾಸನೆ ಸೂಸುವ ರೊಚ್ಚು ನೀರು, ಹಿಂಡುಗಟ್ಟಿ ಬಂದು ಎಲ್ಲೆಂದರಲ್ಲಿ ಕಚ್ಚುವ ಸೊಳ್ಳೆಗಳ ಹಿಂಡು ಸ್ಥಳೀಯರಿಗೆ ಸಾಕು ಸಾಕು ಮಾಡಿ, ಜೀವ ಹಿಂಡುತ್ತಿವೆ.

ಇದೇ ಪ್ರದೇಶದಲ್ಲಿ ಕೆಲವೆಡೆ ನಗರೋತ್ಥಾನ ಯೋಜನೆ ಅಡಿ ಹೊಸ ಚರಂಡಿ ನಿರ್ಮಿಸಲಾಗುತ್ತದೆ ಎಂದು ಹಳೆ ಚರಂಡಿಗಳನ್ನು ಕಿತ್ತು ಹಾಕಿದ್ದು ‘ಗಾಯದ ಮೇಲೆ ಬರೆ’ ಎಳೆದಂತಾಗಿ ಮತ್ತಷ್ಟು ಇಲ್ಲಿನ ಜನರಿಗೆ ಸಂಕಷ್ಟ ಹೆಚ್ಚಿಸಿದೆ. ಮಳೆ ಕಾಣಿಸಿಕೊಂಡರೆ ಈ ಇಲ್ಲಿನ ಜನರಿಗೆ ಮೈನಡುಕ ಹುಟ್ಟುತ್ತದೆ. ಪ್ರತಿ ಮಳೆಗಾಲದಲ್ಲಿ ಅನುಭವಿಸಬೇಕಾದ ನರಕಯಾತನೆಗೆ ಬೇಸತ್ತು ಅನೇಕರು ತಮ್ಮ ವಾಸವನ್ನು ಬೇರೆಡೆ ಸ್ಥಳಾಂತರಿಸಿದ ಸಾಕಷ್ಟು ಉದಾಹರಣೆಗಳು ಇಲ್ಲಿವೆ.

ಹದಗೆಟ್ಟ ಚರಂಡಿ, ಕಾಲುವೆಗಳಿಂದಾಗಿಯೇ ಇಂದಿಗೂ ದೊಡ್ಡ ಪ್ರಮಾಣದ ಮಳೆ ಸುರಿದರೆ ನಗರದ ಸುಮಾರು ಆರು ವಾರ್ಡ್‌ಗಳಲ್ಲಿ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುತ್ತದೆ. ಧೋ ಎಂದು ಸುರಿಯುವ ಮಳೆ ಹಿಡಿದರೆ ಕೆಲ ಪ್ರದೇಶಗಳಲ್ಲಿ ಜನ ಮನೆ ತಲುಪಲು ನಾನಾ ಬಗೆಯ ಸರ್ಕಸ್‌ ಮಾಡಬೇಕು.

ಗಮನಿಸಬೇಕಾದ ಅಂಶವೆಂದರೆ, ಮಳೆಯಿಂದ ತತ್ತರಿಸುವ ಪ್ರದೇಶಗಳಲ್ಲಿ ಕೆಳ ವರ್ಗದವರು, ದಲಿತರು, ಅಲ್ಪಸಂಖ್ಯಾತರು, ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಅವರು ಅವಡು ಕಚ್ಚಿ ಅಧಿಕಾರಿಗಳು, ಜನಪ್ರತಿನಿಧಿಗಳ ಅಸಡ್ಡೆಗೆ ತೋರಬೇಕಾದ ಆಕ್ರೋಶ ಹೊರಹಾಕುತ್ತಿಲ್ಲ. ಕಾಳಜಿ ತೋರಬೇಕಾದವರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.

*
ಚರಂಡಿ ಅವ್ಯವಸ್ಥೆಗೆ ಬೇಸತ್ತು ಕೆಲವರು ಇಲ್ಲಿ ಮನೆ ಖಾಲಿ ಮಾಡಿದರು. ಕಷ್ಟಪಟ್ಟು ಕಟ್ಟಿದ ಮನೆ ಬಿಟ್ಟು ಹೋಗುವುದು ಹೇಗೆ ಅಂತಾ ವಿಧಿ ಇಲ್ಲದೆ ಇಲ್ಲಿಯೇ ಬದುಕಿದ್ದೇವೆ.
-ಶ್ರೀನಿವಾಸ್‌, 8ನೇ ವಾರ್ಡ್‌ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT