ಚಿಕ್ಕಬಳ್ಳಾಪುರ: ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಮತ್ತು ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸುವಂತೆ ಆಗ್ರಹಿಸಿ ಡಿ.19ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ‘ಮಾಡು ಇಲ್ಲವೆ ಮಡಿ’ ಹೋರಾಟ ಹಮ್ಮಿಕೊಳ್ಳಲಾಗಿದೆ.
ಈ ಭಾಗವಾಗಿ ಇದೇ 29ರಂದು ಚಿಕ್ಕಬಳ್ಳಾಪುರ ಡಿಡಿಪಿಐ ಕಚೇರಿ ಆವರಣದಲ್ಲಿ ಬಹಿರಂಗ ಸಭೆ ಹಾಗೂ ಒಪಿಎಸ್ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಾಲರಾಜ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಮಟ್ಟದ ಹೋರಾಟದ ರೂಪುರೇಷೆಗಳನ್ನು ಸಿದ್ಧಗೊಳಿಸಲಾಗಿದೆ. ನೌಕರರಲ್ಲಿ ಜಾಗೃತಿ ಮೂಡಿಸಲು ಮತ್ತು ಹೋರಾಟಕ್ಕೆ ನೌಕರರನ್ನು ಸಂಘಟಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಒಪಿಎಸ್ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಈ ಭಾಗವಾಗಿ 29ರಂದು ಜಿಲ್ಲೆಯಲ್ಲೂ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಚಿಂತಾಮಣಿಯಿಂದ ಯಾತ್ರೆ ಆರಂಭವಾಗಲಿದೆ. ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ಬರಲಿದೆ. ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದ್ದು, 1 ಸಾವಿರ ನೌಕರರು ಭಾಗಿಯಾಗುವರು. ಸಭೆಯ ನಂತರ ಬಿಬಿ ರಸ್ತೆಯಲ್ಲಿ ಜಾಥಾ ನಡೆಸಲಾಗುವುದು. ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಹೋರಾಟ ನಡೆಸಲಾಗುವುದು. ನಂತರ ಬಾಗೇಪಲ್ಲಿ, ಗುಡಿಬಂಡೆ ಮತ್ತು ಗೌರಿಬಿದನೂರು ತಾಲ್ಲೂಕಿಗೆ ಯಾತ್ರೆ ಸಾಗಲಿದೆ ಎಂದು ಹೇಳಿದರು.
ಎನ್ಪಿಎಸ್ ನೌಕರರು ರಜೆ ಹಾಕಿ ಹೋರಾಟದಲ್ಲಿ ಪಾಲ್ಗೊಳ್ಳುವರು.ಸಂಘದ ರಾಜ್ಯ ಘಟಕದ ಅಧ್ಯಕ್ಷಶಾಂತಾರಾಮ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಎನ್ಪಿಎಸ್ನಿಂದ ನೌಕರರ ಸಂಧ್ಯಾ ಕಾಲದ ಬದುಕು ಕಷ್ಟಕ್ಕೆ ಸಿಲುಕಿದೆ. ನಿವೃತ್ತಿ ನಂತರ ನೌಕರರು ಬದುಕು ಚೆನ್ನಾಗಿರಬೇಕು ಅಂದರೆ ಎನ್ಪಿಎಸ್ ನಿರ್ಮೂಲನೆ ಆಗಬೇಕು. ಒಪಿಎಸ್ ಸೌಲಭ್ಯ ಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 39 ಇಲಾಖೆಗಳ 2.5 ಲಕ್ಷ ನೌಕರರು ನೂತನ ಪಿಂಚಣಿ ಯೋಜನೆಗೆ ಒಳಪಡುವರು. ಜಿಲ್ಲೆಯಲ್ಲಿ 4 ಸಾವಿರ ನೌಕರರು ಎನ್ಪಿಎಸ್ಗೆ ಒಳಪಡಲಿದ್ದಾರೆ. ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಎನ್ಪಿಎಸ್ ರದ್ದುಗೊಳಿಸಲಾಗಿದೆ ಎಂದರು.
ಸಂಘದ ಪದಾಧಿಕಾರಿಗಳಾದವಿಷ್ಣುವರ್ಧನ್, ಅಮರ್, ಶಿವರಾಜ್, ಶಿವಕುಮಾರ್, ನಾರಾಯಣ ಸ್ವಾಮಿ, ಶಿವಣ್ಣ, ಬಾಲು ಗೋಷ್ಠಿಯಲ್ಲಿ ಇದ್ದರು.