ಬಾಗೇಪಲ್ಲಿ: ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ ಪಟ್ಟಣದ ಸಿವಿಲ್ ನ್ಯಾಯಾಲಯ ಪಕ್ಕದಲ್ಲಿನ ಚಿತ್ರಾವತಿ ಮೇಲುಸೇತುವೆಯಲ್ಲಿ ನೀರು ಹರಿಯುತ್ತಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಚಿತ್ರಾವತಿ ಕಣಜ ದಲ್ಲಿಯೂ ನೀರು ತುಂಬಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರಿಗೂ ಮಿಂಚು ಗುಡುಗು ಸಹಿತ ಭಾರೀ ಮಳೆ ಸುರಿದಿದೆ.
ಚಿತ್ರಾವತಿ ಒಡ್ಡುವಿನಲ್ಲಿ ತುಂಬಿ ಹರಿದ ನೀರು ಸಂತೆ ಮೈದಾನದ ರಸ್ತೆಯ ಮೇಲುಸೇತುವೆ, ಸಿವಿಲ್ ನ್ಯಾಯಾಲಯದ ಪಕ್ಕದ ಮೇಲುಸೇತುವೆ ಕೆಳಗೆ ಹರಿಯುತ್ತಿದೆ. ಈ ನೀರು ಆಂಧ್ರಪ್ರದೇಶದ ಬುಕ್ಕಪಟ್ನಂ ಕೆರೆಗೆ ಹಾದು ಹೋಗುತ್ತದೆ.
ಮೇಲುಸೇತುವೆ ಕೆಳಭಾಗದಲ್ಲಿದ್ದ ಪ್ಲಾಸ್ಟಿಕ್, ತ್ಯಾಜ್ಯ, ಕಳೆ, ಮುಳ್ಳಿನ ಗಿಡಗಳು ಕೊಚ್ಚಿಕೊಂಡು ಹೋಗಿವೆ. ಆಂಧ್ರಪ್ರದೇಶಕ್ಕೆ ನೀರು ಹರಿಯದಂತೆ ತಡೆಯಲು ಬ್ರಿಟಿಷರು ಚಿತ್ರಾವತಿ ಕಣಜ ನಿರ್ಮಿಸಿದ್ದರು. ಈ ಕಣಜ ತುಂಬಿ ಹರಿಯುತ್ತಿದೆ.