ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದಲ್ಲಿ ಕೆಂಪು ಮಚ್ಚೆಯ ಕಪ್ಪೆ ಪತ್ತೆ

Last Updated 26 ಏಪ್ರಿಲ್ 2021, 5:55 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕಪ್ಪೆಗಳ ಕೂಗು ಕೇಳಿಸಿತೆಂದರೆ ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಜನಪದರಲ್ಲಿದೆ. ಕೆಲವಾರು ವಿಧದ ಕಪ್ಪೆಗಳು ಬೇಸಿಗೆಯ ಬಿಸಿಗೆ ಭೂಮಿಯಲ್ಲಿನ ತೇವದ ಪ್ರದೇಶಗಳನ್ನು ಆಶ್ರಯಿಸಿ ಸುಖ ನಿದ್ರೆಯಲ್ಲಿರುತ್ತವೆ. ಮುಂಗಾರು ಮಳೆಯ ಹನಿಗಳು ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ನಿದ್ದೆಯಿಂದೆದ್ದು ಹೊರಬರುವ ಕಪ್ಪೆಗಳು ವಟಗುಟ್ಟತೊಡಗುತ್ತವೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಬಿದ್ದ ಮಳೆ ಇಳೆಯನ್ನು ತಂಪಾಗಿಸಿದಂತೆಯೇ ತಾಲ್ಲೂಕಿನ ಕೊತ್ತನೂರಿನ ತೋಟವೊಂದರ ಒಣಗಿ ಬಿದ್ದುಹೋದ ತೆಂಗಿನ ಮರದ ಕಾಂಡದೊಳಗೆ ಅಪರೂಪದ ಕಪ್ಪೆಯೊಂದು ಕಾಣಿಸಿದೆ.

ಕಡು ಕಂದು ಬಣ್ಣದ ದೇಹದ ಮೇಲೆ ಕೆಂಬಣ್ಣದ ಮಚ್ಚೆಯಿದೆ. ನೀರಿನ ಸೆಲೆಗಳಿಗಿಂದ ಒಣ ಎಲೆ, ತೆಂಗಿನ ಪೊಟರೆಯೊಳಗೆ ವಾಸಿಸುವ ಈ ಕಪ್ಪೆಯನ್ನು ಇಂಗ್ಲಿಷ್‌ನಲ್ಲಿ ಪೇಯಿಂಟೆಡ್ ಬೆಲೂನ್ ಫ್ರಾಗ್, ಶ್ರೀಲಂಕನ್ ಬುಲ್ ಫ್ರಾಗ್ ಎಂದು ಕರೆಯುತ್ತಾರೆ. ಮಳೆಗಾಲದ ಪ್ರಾರಂಭದಲ್ಲಿ ಗಂಡು ಕಪ್ಪೆ ಹೆಣ್ಣು ಕಪ್ಪೆಯನ್ನು ತನ್ನ ವಿಶಿಷ್ಟ ದನಿಯಿಂದ ಕೂಗಿ ಕರೆಯುತ್ತದೆ. ಇರುವೆಗಳು ಸೇರಿದಂತೆ ಹಲವಾರು ಸಣ್ಣಪುಟ್ಟ ಕೀಟಗಳನ್ನು ಈ ಕಪ್ಪೆ ತಿನ್ನುತ್ತದೆ.

‘ಸಾಮಾನ್ಯವಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ವೈವಿಧ್ಯಮಯವಾದ ಕಪ್ಪೆಗಳು ಕಂಡುಬರುತ್ತವೆ. ಆದರೆ ಬಯಲು ಸೀಮೆಯಾದ ನಮ್ಮಲ್ಲಿ ವೈವಿಧ್ಯತೆ ಕಡಿಮೆ. ಒಣ ತೆಂಗಿನ ಮರದ ಪೊಟರೆಗಳು ಹಕ್ಕಿಗಳ ವಾಸಕ್ಕೆ ಅನುಕೂಲವೆಂದು ತಿಳಿದಿತ್ತು. ಇದೀಗ ಅದು ಕಪ್ಪೆಗಳ ಆವಾಸಸ್ಥಾನವೂ ಆಗಿದೆಯೆಂದು ತಿಳಿಯಿತು. ಮುರಿದಿದ್ದ ತೆಂಗಿನ ಕಾಂಡವನ್ನು ಕತ್ತರಿಸಲು ಹೋದಾಗ ಈ ವಿಶೇಷವಾದ ಕಪ್ಪೆ ಕಾಣಿಸಿತು. ಅದರಿಂದ ಮರವನ್ನು ಹಾಗೆಯೇ ಬಿಟ್ಟೆ’ ಎಂದು ಕೊತ್ತನೂರಿನ ಸ್ನೇಕ್ ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT