ಚಿಕ್ಕಬಳ್ಳಾಪುರ: ಇತ್ತೀಚೆಗೆ 2017ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಎಚ್.ನಂಜುಂಡಯ್ಯ ಅವರಿಗೆ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಎಸ್ಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ನಂಜುಂಡಯ್ಯ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಕಾರ್ತಿಕ್ ರೆಡ್ಡಿ, ‘ಸರಳತೆ, ಪ್ರಾಮಾಣಿಕತೆ, ಮಾನವೀಯತೆ ಮೈಗೂಡಿಸಿಕೊಂಡಿರುವ ನಂಜುಂಡಯ್ಯನವರ ಸೇವೆಯನ್ನು ಗುರುತಿಸಿ ಈ ಹಿಂದೆಯೇ ಅವರಿಗೆ ಈ ಪದಕ ಸಿಗಬೇಕಿತ್ತು. ತಡವಾಗಿಯಾದರೂ ದೊರೆತಿರುವುದು ನಮಗೆ ಹೆಮ್ಮೆ ತಂದಿದೆ’ ಎಂದು ಹೇಳಿದರು.
ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ಅನೇಕ ವರ್ಷಗಳಿಂದ ಪ್ರಾಣಿಗಳಿಗೆ ಆಹಾರ ನೀಡುತ್ತ ಬಂದಿರುವ ನಂಜುಂಡಯ್ಯನವರ ಗುಣ ಇತರರಿಗೆ ಅನುಕರಣೀಯವಾಗಿದೆ. ಪ್ರತಿಯೊಬ್ಬ ಅಧಿಕಾರಿಗಳು ಮಾನವೀಯತೆ ಮೈಗೂಡಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಇಲಾಖೆಗೂ ಮತ್ತು ಅವರಿಗೆ ಉತ್ತಮ ಹೆಸರು ಬರುತ್ತದೆ’ ಎಂದು ತಿಳಿಸಿದರು.
ಡಿವೈಎಸ್ಪಿ ಪ್ರಭುಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಮಾರ್ಕಂಡಯ್ಯ, ಎಸ್ಐ ರಾಘವೇಂದ್ರ ಪ್ರಸಾದ್, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಉಪನ್ಯಾಸಕ ಲೋಕನಾಥ್ ಉಪಸ್ಥಿತರಿದ್ದರು.