ಗುಡಿಬಂಡೆ: ತಾಲ್ಲೂಕಿನ ರೈತರು ಬಿತ್ತನೆ ಕಾರ್ಯದಲ್ಲಿದ್ದು ರಸಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡದೇ ಸರ್ಕಾರ ನಿಗದಿಪಡಿಸಿದ ದರದಂತೆ ಮಾರಾಟ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಅನೀಸ್ ಸಲ್ಮಾ ಎಚ್ಚರಿಸಿದರು.
ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ನಡೆದ ರಸಗೊಬ್ಬರ ಮಾರಾಟಗಾರರ ಪೂರ್ವಭಾವಿ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲ್ಲೂಕಿನಲ್ಲಿ ಬಿತ್ತನೆಗೆ 11,886 ಹೆಕ್ಟೇರ್ ಪ್ರದೇಶವಿದೆ. ಈಗಾಗಾಲೇ, ಒಂದು ಸಾವಿರಕ್ಕೂ ಹೆಚ್ಚು ರೈತರು ರಿಯಾಯಿತಿ ದರದಲ್ಲಿ ನೆಲಗಡಲೆ 112 ಕ್ವಿಂಟಲ್, ರಾಗಿ 17.6 ಕ್ವಿಂಟಲ್, ತೊಗರಿ 18.5 ಕ್ವಿಂಟಲ್, ಮುಸುಕಿನ ಜೋಳ 30.6 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ ಎಂದರು.
ಎಲ್ಲ ರಸಗೊಬ್ಬರಗಳಿಗೂ ದರ ನಿಗದಿಪಡಿಸಿದ್ದು, ಆ ದರದಂತೆ ರೈತರಿಗೆ ಮಾರಾಟ ಮಾಡಬೇಕು. ಒಂದು ವೇಳೆ ಹೆಚ್ಚಿನ ದರ ಪಡೆದ ದೂರು ಬಂದಲ್ಲಿ ಸಂಬಂಧಪಟ್ಟ ಮಾರಾಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ತಾಲ್ಲೂಕಿಗೆ ಬೇಕಾದ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರು ತಾವು ಬೆಳೆದ ಬೆಳೆಗಳಿಗೆ ತಪ್ಪದೇ ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ತಾವು ಹೊಂದಿದ ಬ್ಯಾಂಕ್ ಅಥವಾ ಸಿಎಸ್ಸಿ ಕೇಂದ್ರಗಳಿಗೆ ತೆರಳಿ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
ತಾಂತ್ರಿಕ ಕೃಷಿ ಅಧಿಕಾರಿ ಎನ್. ಶಂಕರಯ್ಯ ಮಾತನಾಡಿ, ರೈತರು ಆಧಾರ್ ಕಾರ್ಡ್, ಪಹಣಿ ಪ್ರತಿಯೊಂದಿಗೆ ಪಿಒಎಸ್ ಮಿಷನ್ ಮೂಲಕ ಬೆರಳಚ್ಚು ನೀಡಿ ರಶೀದಿ ಪಡೆದು ಗೊಬ್ಬರ ಪಡೆದುಕೊಳ್ಳಬೇಕು. ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಒಟ್ಟು 528.6 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ ಎಂದು ವಿವರಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಅಶ್ವತ್ಥಪ್ಪ, ಕೃಷಿ ಇಲಾಖೆಯ ಲಾವಣ್ಯ, ಸಂಧ್ಯಾ ಇದ್ದರು.