ಶಿಡ್ಲಘಟ್ಟ: ಕೊರೊನಾ ಖಾಸಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯ ಜೀವ ಮತ್ತು ಜೀವನವನ್ನು ಕಸಿದಿದೆ. ಖಾಸಗಿ ಶಾಲಾ ಶಿಕ್ಷಕರು ಜೀವಂತ ಶವಗಳಾಗಿದ್ದೇವೆ. ನಮ್ಮೆಡೆಗೆ ಸರ್ಕಾರ ಕಣ್ತೆರೆದು ನೋಡಲಿ ಎಂದು ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲ್ಲೂಕು ಒಕ್ಕೂಟದ ಸದಸ್ಯರು ನಗರದ ಕೋಟೆ ವೃತ್ತದಲ್ಲಿ ಬುಧವಾರ ಪ್ರತಿಭಟಿಸಿದರು.
ಕ್ರೆಸೆಂಟ್ ಶಾಲೆಯ ತಮೀಮ್ ಅನ್ಸಾರಿ ಮತ್ತು ಎಸ್.ಆರ್.ಇ.ಟಿ ವಿದ್ಯಾಸಂಸ್ಥೆಯ ಶ್ರೀರಾಮರೆಡ್ಡಿ ಮಾತನಾಡಿ, ಸರ್ಕಾರ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಶಿಕ್ಷಕರು ಅತಂತ್ರರಾಗಿದ್ದಾರೆ. ಸರ್ಕಾರ ನಮ್ಮ ಪರವಾಗಿ ನಿಲ್ಲಬೇಕು. ಪೋಷಕರು ಶಾಲಾ ಶುಲ್ಕ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವೇ ಪರಿಹಾರ ಧನ ನೀಡಬೇಕೆಂದು ಘೋಷಿಸಬೇಕು. ದ್ವಂದ್ವ ಹೇಳಿಕೆ ನೀಡದೇ ಮಲತಾಯಿ ಧೋರಣೆ ಮಾಡದೇ ನಮಗೆ ಸರಿಯಾದ ಪರಿಹಾರೋಪಾಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಾಲ್ಪಿನ್ ವಿದ್ಯಾಸಂಸ್ಥೆಯ ಎ. ನಾಗರಾಜು, ಮಹದೇವ್, ಗೋಪಿನಾಥ್, ವಿಸ್ಡಮ್ ನಾಗರಾಜು, ಮಂಜುನಾಥ್, ಮಹೇಶ್, ಶಾಂತರಾಜು ಸೇರಿದಂತೆ ತಾಲ್ಲೂಕಿನ ಖಾಸಗಿ ಶಾಲೆಯ 673 ಶಿಕ್ಷಕರು ಪಾಲ್ಗೊಂಡಿದ್ದರು.