ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಸಿನಿಮಾದಲ್ಲಿ ಪ್ರೀತಿ, ಪ್ರೇಮ ಎಂಬುದು ಹೊಸ ವಿಚಾರ ಅಲ್ಲದಿದ್ದರೂ, ಪ್ರೇಮಿಗಳಿಗಾಗಿ ಒಂದು ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ‘ನಾನು L/o ಜಾನು’ ಈ ಸಿನಿಮಾದ ಹೆಸರು.
ಇದರ ನಿರ್ದೇಶಕ ಸುರೇಶ್ ಜಿ. ಈ ಸಿನಿಮಾದ ನಿರ್ಮಾಪಕರಿಗೆ ಸಿನಿಮಾ ನಿರ್ಮಾಣ ಹೊಸ ಅನುಭವ ಆಗಿದ್ದರೂ, ಅವರು ಖರ್ಚು ವೆಚ್ಚಗಳ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಚಿತ್ರತಂಡ ಹೇಳಿದೆ. ಅಂದಹಾಗೆ ಈ ಸಿನಿಮಾಕ್ಕೆ ಹಣ ಹೂಡಿರುವವರು ವಿಷ್ಣು ಭಂಡಾರಿ, ರವಿಶಂಕರ್ ಮತ್ತು ರಾಜು.
‘ಇದು ಲವರ್ಸ್ಗಾಗಿ ಮಾಡಿರುವ ಸಿನಿಮಾ. ಒಮ್ಮೆ ನೋಡಿದವರು ಮತ್ತೊಮ್ಮೆ ಸಿನಿಮಾ ನೋಡಬೇಕು ಅಂದುಕೊಳ್ಳುತ್ತಾರೆ. ಸಿನಿಮಾದ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ’ ಎಂದರು ವಿಷ್ಣು. ಸಿನಿಮಾ ಬಗ್ಗೆ ಮಾಹಿತಿ ನೀಡಲು ಸಿನಿತಂಡ ಸುದ್ದಿಗೋಷ್ಠಿ ಕರೆದಿತ್ತು.
ನಿರ್ಮಾಪಕ ವಿಷ್ಣು ಅವರು ಈ ಸಿನಿಮಾದಲ್ಲಿ ವಿಲನ್ ಪಾತ್ರವನ್ನೂ ನಿಭಾಯಿಸಿದ್ದಾರೆ. ‘ನನ್ನ ದೇಹದ ಗಾತ್ರ ಕಂಡು ನಿರ್ದೇಶಕರು ನನ್ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿರಬೇಕು’ ಎಂದು ಕಿರುನಗೆ ಬೀರಿದರು ವಿಷ್ಣು.
‘ಸಿನಿಮಾದ ನಾಯಕಿಯ ಹೆಸರು ಜಾನಕಿ. ಅವಳನ್ನು ಸ್ವೀಟ್ ಆಗಿ ಆಕೆಯನ್ನು ಜಾನು ಎಂದು ಕರೆಯುವುದು’ ಎಂದು ವಿವರ ನೀಡಿದರು ಚಿತ್ರದ ಕ್ಯಾಪ್ಟನ್ ಸುರೇಶ್.
ಈ ಸಿನಿಮಾ 60ರಿಂದ 70 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಲಿದೆಯಂತೆ. ‘ಈ ಸಿನಿಮಾವನ್ನು ಪ್ರೇಮಿಗಳು ಮಾತ್ರವೇ ಅಲ್ಲ, ಎಲ್ಲರೂ ನೋಡಬಹುದು. ತುಮಕೂರು, ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ’ ಎಂದು ಸುರೇಶ್ ಹೇಳಿದರು. ‘ವಿಧಿಯಾಟವೇ ಈ ಸಿನಿಮಾದ ವಿಲನ್’ ಎಂದು ಸುರೇಶ್ ತಿಳಿಸಿದರು.
ಸುದ್ದಿಗೋಷ್ಠಿಯ ಕೊನೆಯಲ್ಲಿ ವಿಶಾಲ್ ಅವರು ಮಾತಿಗೆ ನಿಂತರು. ‘ನಾನು ಹೇಗೆ ಸಿದ್ಧನಾಗಬೇಕು ಎಂದು ಕೇಳಿದಾಗಲೆಲ್ಲ ನಿರ್ದೇಶಕರು, ಹೇಗಿದ್ದೀಯೋ ಹಾಗೇ ಬಾ ಅನ್ನುತ್ತಿದ್ದರು. ಇದರಲ್ಲಿ ನನ್ನ ಸಹಜ ಅಭಿನಯ ಇದೆ. ಇದು ಹೊಸಬರ ಸಿನಿಮಾ ಅನಿಸುತ್ತಿಲ್ಲ ಎಂದು ಇದನ್ನು ವೀಕ್ಷಿಸಿದವರು ಹೇಳಿದ್ದಾರೆ’ ಎಂದರು ವಿಶಾಲ್. ‘ಸಿನಿಮಾ ಚಿತ್ರೀಕರಣದ ವೇಳೆ ರೀಟೇಕ್ಗಳು ಕಡಿಮೆ ಇದ್ದವು. ನಿರ್ದೇಶಕರು ನಮ್ಮಿಂದ ಅಷ್ಟು ಚೆನ್ನಾಗಿ ಕೆಲಸ ತೆಗೆಸಿದ್ದಾರೆ’ ಎಂದು ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.