ಗುಡಿಬಂಡೆ: ತಾಲ್ಲೂಕು ಕೇಂದ್ರದಲ್ಲಿ ಸಾರಿಗೆ ಘಟಕ ಸ್ಥಾಪಿಸಲು ಆಗ್ರಹಿಸಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯಿಂದ ಅಂಬೇಡ್ಕರ್ ಪುತ್ಥಳಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 5ನೇ ದಿನಕ್ಕೆ ಮುಂದುವರಿದಿದೆ.
ಅಂಗವಿಕಲರ ಕಲ್ಯಾಣ ನಿಧಿಯ ತಾಲ್ಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ‘ಕೆಎಸ್ಆರ್ಟಿಸಿಯಿಂದ ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ 1,500 ಬಸ್ ಪಾಸ್ ನೀಡಲಾಗಿದೆ. ತಾಲ್ಲೂಕು ಕೇಂದ್ರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ದಿನ ಖಾಸಗಿ ಬಸ್ಗಳಲ್ಲಿ ಸಂಚರಿಸಬೇಕಾಗಿದೆ. ಹೆಸರಿಗೆ ಮಾತ್ರ ಪಾಸ್ ಇದೆ. ಅದರ ಉಪಯೋಗ ಆಗುತ್ತಿಲ್ಲ. ಕೂಡಲೇ ಕೆಎಸ್ಆರ್ಟಿಸಿ ಸಾರಿಗೆ ಘಟಕ ಸ್ಥಾಪಿಸಬೇಕು’ ಎಂದರು.
ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ಅಧ್ಯಕ್ಷ ಜಿ.ವಿ.ಗಂಗಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ ಸಾರಿಗೆ ಘಟಕ ಸ್ಥಾಪನೆಗೆ ಮಾಡುವಂತೆ 5 ದಿನಗಳಿಂದ ಧರಣಿ ನಡೆಯುತ್ತಿದೆ. ಇದುವರೆಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಂದು ಸಮಸ್ಯೆ ಬಗ್ಗೆ ಕೇಳಿಲ್ಲ. ತಾಲ್ಲೂಕಿನಲ್ಲಿ ಸಾರಿಗೆ ಘಟಕ ಸ್ಥಾಪಿಸುವವರೆಗೂ ಧರಣಿ ಮುಂದುವರೆಯುತ್ತದೆ’ ಎಂದರು.
ಸತ್ಯಾಗ್ರಹ ಸ್ಥಳಕ್ಕೆ ತಹಶೀಲ್ದಾರ್ ಸಿಗ್ಬತ್ಉಲ್ಲಾ ಭೇಟಿ ನೀಡಿದರು. ನರಸಿಂಹಪ್ಪ, ಲಕ್ಷ್ಮಿನಾರಾಯಣ, ನಾಗವೇಣಿ, ನರಸಿಂಹಮೂರ್ತಿ, ಸಲ್ಮಾ, ಸಾವಿತ್ರಮ್ಮ ಇದ್ದರು.