ಚೇಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಂಗಾ ಬಿತ್ತನೆ ಬೀಜ ಹೆಚ್ಚು ವಿತರಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಕೃಷಿ ಸಂಪರ್ಕ ಕೇಂದ್ರದ ಮುಂದೆ ಗುರುವಾರ ದಿಢೀರ್ ಧರಣಿ ನಡೆಸಿದರು.
‘ಚೇಳೂರು ರೈತ ಸಂಪರ್ಕ ಕೇಂದ್ರಕ್ಕೆ ಶೇಂಗಾ ಬಿತ್ತನೆ ಬೀಜ 500 ಮೂಟೆ ಬಂದಿದೆ. ಇದರಲ್ಲಿ ಪರಿಶಿಷ್ಟ ಜಾತಿ ರೈತರಿಗೆ 38 ಮೂಟೆ, ಪರಿಶಿಷ್ಟ ಪಂಗಡವರಿಗೆ 17 ಮೂಟೆ ಮಾತ್ರ ವಿತರಿಸಲಾಗುತ್ತಿದೆ. ಉಳಿದ 445 ಮೂಟೆ ಸಾಮಾನ್ಯ ವರ್ಗದ ರೈತರಿಗೆ ವಿತರಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದು ದೂರಿ ರೈತರು ಪ್ರತಿಭಟನೆಗೆ ಕುಳಿತರು.
ಸುದ್ದಿ ತಿಳಿದೊಡನೆ ಸ್ಥಳಕ್ಕೆ ಬಂದ ಕೃಷಿ ಸಹಾಯಕ ನಿರ್ದೇಶಕ ಎಸ್.ವಿ. ಮಂಜುನಾಥ, ಸರ್ಕಾರದ ಆದೇಶವನ್ನು ನಾವು ಅನುಸರಿಸಬೇಕು. 300 ಕ್ವಿಂಟಲ್ ಶೇಂಗಾ ಬಿತ್ತನೆ ಬೀಜ ಕೇಳಿದ್ದೆವು, 150 ಕ್ವಿಂಟಲ್ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಹೆಚ್ಚು ಶೇಂಗಾ ಬಿತ್ತನೆ ಬೀಜ ತರಿಸಲಾಗುವುದು. ರೈತರು ಅಧಿಕಾರಿಗಳಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು. ಬಳಿಕ ಧರಣಿ ನಿಲ್ಲಿಸಲಾಯಿತು.
ರೈತ ಮುಖಂಡರಾದ ವೈ.ಶಂಕರಪ್ಪ, ಪಿ.ಎನ್.ಶಂಕರಪ್ಪ, ಜಿಂಕಪಲ್ಲಿ ಆರ್.ವಿ.ವೆಂಕಟರವಣಪ್ಪ, ಆರ್.ಎನ್.ಜಯರಾಮ್, ಕಾಶಿರಾಮಕೃಷ್ಣಪ್ಪ, ನಂಜುಂಡಪ್ಪ, ಜಲಿಪಿಗಾರಪಲ್ಲಿ ಕೆ.ವಿ.ರಾಮಚಂದ್ರಪ್ಪ, ಕೆ.ಶ್ರೀರಾಮ, ಎಂ.ಜಿ.ವೆಂಕಟರವಣ, ಬಿಂಗೆಪ್ಪಗಾರಿ ಮಲ್ಲಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.