ಚಿಕ್ಕಬಳ್ಳಾಪುರ: ‘ಕೋಳಿ ಸಾಕಾಣಿಕೆದಾರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ( ಅ.19) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ಸಿ.ನಂಜುಂಡಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಹುರಾಷ್ಟ್ರೀಯ ಕಂಪನಿಗಳು ಕೋಳಿ ಸಾಕಾಣಿಕೆ ರೈತರಿಗೆ ಕಳಪೆ ಗುಣಮಟ್ಟದ ಕೋಳಿ ಮರಿ, ಆಹಾರ ಹಾಗೂ ಔಷಧಿಗಳನ್ನು ಪೂರೈಕೆ ಮಾಡಿರುವ ಪರಿಣಾಮ ಸಾವಿರಾರು ಕೋಳಿ ಸಾಕಾಣಿಕೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ತಿಳಿಸಿದರು.
‘ಬಹುರಾಷ್ಟ್ರೀಯ ಕಂಪನಿಗಳು ಒಡಂಬಡಿಕೆ ಪ್ರಕಾರ ರೈತರಿಗೆ ವಾರ್ಷಿಕವಾಗಿ ಸರಿಯಾಗಿ ಬ್ಯಾಚುಗಳು ನೀಡುತ್ತಿಲ್ಲ. ನೀಡಿದರೂ ಗುಣಮಟ್ಟ ಸರಿಯಾಗಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿರುವ ರೈತರು ಕೈ ಸುಟ್ಟುಕೊಂಡು ಬೀದಿಗೆ ಬರುವಂತಾಗಿದೆ’ ಎಂದರು.
ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರಾದ ದೇವನಹಳ್ಳಿ ಕೆ.ಆರ್.ಮಂಜುನಾಥ, ಬಾಗೇಪಲ್ಲಿ ಆರ್.ರಮೇಶ್, ಗುಡಿಬಂಡೆ ನಾರಾಯಣಸ್ವಾಮಿ, ಸುಬ್ರಮಣಿ, ಶ್ರೀನಿವಾಸ್, ಕೃಷ್ಣಪ್ಪ ಹಾಜರಿದ್ದರು.