ಚಿಕ್ಕಬಳ್ಳಾಪುರ: ‘ಇಂದಿನ ರಾಜಕಾರಣಿಗಳಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಬದುಕು ಆದರ್ಶಪ್ರಾಯವಾಗಬೇಕು’ ಎಂದು ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಹೇಳಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದ ಯೋಗಿ ನಾರೇಯಣ ಯತೀಂದ್ರರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜೀವ್ ಗಾಂಧಿ ಅವರು ಈ ದೇಶ ಕಂಡಂತಹ ಜನಾನುರಾಗಿ ಪ್ರಧಾನಿ ಆಗಿದ್ದರು. ಅಂದಿನ ಕಾಲಘಟ್ಟದಲ್ಲೇ ಭಯೋತ್ಪಾದನೆ ಎಂಬ ಪಿಡುಗನ್ನು ಬಗ್ಗು ಬಡಿಯಲು ಹಲವಾರು ತಂತ್ರಗಾರಿಕೆಗಳನ್ನು ಮಾಡಿ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದರು. ಅದರ ಪರಿಣಾಮ ಅವರು ಪ್ರಾಣವನ್ನೇ ಬಲಿ ಕೊಡಬೇಕಾಯಿತು’ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ‘ಈ ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡಿದ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು ಅವರು ಮೊದಲಿಗರು. ಎಲ್ಲ ಜನಾಂಗಗಳ ಸಮಾನತೆಗಾಗಿ ಹೋರಾಟ ಮಾಡುತ್ತಲೇ ಜನಪರ ಯೋಜನೆಗಳನ್ನು ರೂಪಿಸಿದ್ದು ಅವರ ಹೆಮ್ಮೆ’ ಎಂದರು.
‘ಅಂದಿನ ಕಾಲದಲ್ಲಿ ಭೂ ಮಾಲೀಕರ ಅಟ್ಟಹಾಸ ಎಲ್ಲೇ ಮೀರಿತ್ತು, ಅವರನ್ನು ಮಟ್ಟ ಹಾಕಲು ಉಳುವವನೇ ಭೂಮಿ ಒಡೆಯ ಎಂಬ ಕಾಯ್ದೆ ಜಾರಿಗೆ ತಂದರು. ಆದರೆ, ಈಗಿನ ಬಿಜೆಪಿ ಸರ್ಕಾರ ಉಳ್ಳವರಿಗೆ ಭೂಮಿ ನೀಡಲು ಮುಂದಾಗಿರುವುದು ರೈತ ವಿರೋಧಿ ಧೋರಣೆ ಅನಾವರಣಗೊಳಿಸಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಎನ್ಎಸ್ಯುಐ ಸಂಚಾಲಕ ಮುನೀಂದ್ರ, ಯುವ ಕಾಂಗ್ರೆಸ್ ಮುಖಂಡರಾದ ಕುಬೇರ್ ಅಚ್ಚು, ನರೇಶ್ ಚಂಟಿ, ರಾಜೇಂದ್ರ ಜಾನಿ,ಹೇಮಂತ್, ಸುದರ್ಶನ, ಅಲ್ಲು ಅನಿಲ್, ಎಂ.ಶ್ರೀನಿವಾಸ್ ಹಾಜರಿದ್ದರು.