ಚಿಕ್ಕಬಳ್ಳಾಪುರ: ‘ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ಇಸ್ಕಾನ್ ವತಿಯಿಂದ ಮಂಡಿಕಲ್ಲು ಮತ್ತು ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನೀಡಲು ಸಿದ್ಧ’ ಎಂದು ಇಸ್ಕಾನ್ ಫೌಂಡೇಷನ್ ಮುಖ್ಯಸ್ಥ ಗುಣಕರ ರಾಮದಾಸ ಪ್ರಭು ಹೇಳಿದರು.
ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಊಟದ ತಟ್ಟೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಕ್ಕಳು ಯಾವುದೇ ಕಾರಣಕ್ಕೂ ಹಸಿದು ಶಾಲೆಗೆ ಬಂದು ಶಿಕ್ಷಣ ಪಡೆಯಬಾರದು ಎಂಬ ಉದ್ದೇಶದಿಂದ ನಮ್ಮ ಸಂಸ್ಥೆಯು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ವಿತರಿಸುತ್ತಿದೆ. ಇಲಾಖೆ ಅನುಮತಿ ನೀಡಿದರೆ ಆ ಸೇವೆಯನ್ನು ಈ ಜಿಲ್ಲೆಗೂ ವಿಸ್ತರಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ತಿಳಿಸಿದರು.
ಸಂಸ್ಥೆ ಪದಾಧಿಕಾರಿಗಳಾದ ಸುಬ್ರಮಣ್ಯಂ, ಅಜಿತ್, ಪ್ರೇಮಜಿತ್, ರಮೇಶ್, ಪ್ರಾಂಶುಪಾಲೆ ಗೀತಾ, ಉಪಪ್ರಾಂಶುಪಾಲ ಎ.ಎಚ್.ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಪಿ.ಸುನೀಲ್, ಮುಖ್ಯ ಶಿಕ್ಷಕ ಅಶ್ವತ್ಥನಾರಾಯಣ ಹಾಜರಿದ್ದರು.