ಚಿಕ್ಕಬಳ್ಳಾಪುರ: ‘ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು ನೆರವು ನೀಡುವ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭದ್ರಬುನಾದಿ ಕಲ್ಪಿಸಬೇಕು’ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ನಾಗರಾಜಯ್ಯ ತಿಳಿಸಿದರು.
ಬೆಂಗಳೂರಿನ ರಾಜಸ್ತಾನ್ ಯೂಥ್ ಅಸೋಸಿಯೇಷನ್ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ದೇಣಿಗೆಯಾಗಿ ನೀಡಿದ ಪಠ್ಯ, ನೋಟ್ ಪುಸ್ತಕ, ಕ್ರೀಡಾ ಸಾಮಗ್ರಿ ಹಾಗೂ ಕುಡಿಯುವ ನೀರಿನ ಪ್ಲಾಂಟ್ ಸ್ವೀಕರಿಸಿ ಅವರು ಮಾತನಾಡಿದರು.
‘ಇವತ್ತು ಬಹಳಷ್ಟು ಬಡ ವಿದ್ಯಾರ್ಥಿಗಳು ತಮ್ಮ ಆರ್ಥಿಕ ತೊಂದರೆಯಿಂದ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿದ್ದಾರೆ. ವಿದ್ಯಾರ್ಥಿಗಳು ನೆರವಿನ ಉಪಯೋಗ ಸಾರ್ಥಕಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ರಾಜಸ್ತಾನ್ ಯೂಥ್ ಅಸೋಷಿಯೇಷನ್ ಯುವ ಮುಖಂಡ ರಾಕೇಶ್ ಜೈನ್ ಮಾತನಾಡಿ, ‘ಎಂತಹದೇ ಕಠಿಣ ಸಂದರ್ಭ ಬಂದರೂ ವಿದ್ಯಾರ್ಥಿಗಳು ಅಭ್ಯಾಸ ಮೊಟಕುಗೊಳಿಸಬಾರದು. ಆರ್ಥಿಕ ಸಮಸ್ಯೆ ಇರುವವರು ವಿದ್ಯಾರ್ಥಿ ವೇತನ ಪಡೆದು ಸದುಪಯೋಗಪಡಿಸಿಕೊಳ್ಳಬೇಕು. ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು’ ಎಂದರು.
ಕಾಲೇಜಿನ ಪ್ರಾಧ್ಯಾಪಕರಾದ ಬಿ.ಆರ್.ನರಸಿಂಹಮೂರ್ತಿ, ಸಿ.ಎಸ್.ಧರ್ಮಶೆಟ್ಟಿ, ಶ್ರೀಧರಮೂರ್ತಿ, ಜಿ.ಎಸ್.ಅಶ್ವತ್ಥನಾರಾಯಣ, ಶಿವಪ್ಪ, ವ್ಯವಸ್ಥಾಪಕ ರಮೇಶ್ ಹಾಜರಿದ್ದರು.