ಶಿಡ್ಲಘಟ್ಟ: ವಿಜ್ಞಾನಿಗಳು ತಿಳಿಸಿಕೊಡುವ ತಾಂತ್ರಿಕ ಮಾರ್ಗದರ್ಶನವನ್ನು ರೇಷ್ಮೆ ಬೆಳೆಗಾರರು ಕ್ಷೇತ್ರ ಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರೇಷ್ಮೆ ಜಂಟಿ ನಿರ್ದೇಶಕ ವೈ.ಟಿ.ತಿಮ್ಮಯ್ಯ ಹೇಳಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ರೇಷ್ಮೆ ಇಲಾಖೆಯಿಂದ ಮಂಗಳವಾರ ‘ಚಳಿಗಾಲ, ಬೇಸಿಗೆ ಕಾಲದಲ್ಲಿ ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುಗಳಿಗೆ ತಗುಲುವ ರೋಗಗಳು ಮತ್ತು ಕೀಟಗಳ ಹತೋಟಿ ಕ್ರಮ’ದ ಬಗ್ಗೆ ರೇಷ್ಮೆ ಬೆಳೆಗಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುವಾಗ ಅಂತರವನ್ನು ಹೆಚ್ಚಿಸಿ ನಾಟಿ ಮಾಡುವುದರಿಂದ ಸೊಪ್ಪಿನ ಗುಣಮಟ್ಟ ಹೆಚ್ಚಾಗುತ್ತದೆ. ರೇಷ್ಮೆ ಗೂಡಿನ ಗುಣಮಟ್ಟದ ಹೆಚ್ಚಳಕ್ಕೆ ಕ್ರಮ ಕೈಗೊಂಡಾಗ ಮಾತ್ರ ಉತ್ತಮ ಬೆಲೆ ಬರುತ್ತದೆ ಎಂದರು.
ರೇಷ್ಮೆ ಬೆಳೆಗಾರರು ವಾತಾವರಣದ ವೈಪರೀತ್ಯದಿಂದಾಗಿ ಹಿಪ್ಪುನೇರಳೆ ತಳಿಗಳಿಗೆ ಬರುವ ಕೀಟ ಮತ್ತು ರೋಗಗಳ ಹತೋಟಿ, ರೇಷ್ಮೆ ಹುಳುಗಳಿಗೆ ತಗುಲುವ ವಿವಿಧ ರೋಗಗಳ ಹತೋಟಿ, ರೇಷ್ಮೆ ಬೆಳೆಗಳ ಆರೈಕೆಗೆ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧವಾಗಿ ವಿಜ್ಞಾನಿಗಳಿಂದ ತಾಂತ್ರಿಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರೈತರು ಬಳಸಬಹುದಾದ ಸೋಂಕು ನಿವಾರಕಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ತೋಟಗಳಲ್ಲಿ ಸೊಪ್ಪಿನ ಗುಣಮಟ್ಟದ ಮಹತ್ವ, ಊಜಿ ನೊಣದ ನಿಯಂತ್ರಣ ಮುಂತಾದ ವಿಚಾರವಾಗಿ ತಜ್ಞರು ಮಾರ್ಗದರ್ಶನ ಮಾಡುವರು. ಇದನ್ನು ಕ್ಷೇತ್ರ ಮಟ್ಟದಲ್ಲಿ ಅಳವಡಿಸಿಕೊಂಡು ಗುಣಮಟ್ಟದ ರೇಷ್ಮೆ ಗೂಡನ್ನು ಬೆಳೆಯಿರಿ ಎಂದು ಹೇಳಿದರು.
ಹಿಪ್ಪುನೇರಳೆಗೆ ತಗುಲುವ ರೋಗ ಮತ್ತು ಕೀಟಗಳ ಹತೋಟಿ ಕ್ರಮ ಕುರಿತಾಗಿ ಜಿಕೆವಿಕೆ ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥಗೌಡ ವಿವರಿಸಿದರು.
ರೇಷ್ಮೆ ಹುಳುಗಳಿಗೆ ತಗುಲುವ ರೋಗ ಮತ್ತು ಕೀಟಗಳ ಹತೋಟಿ ಕ್ರಮ ಕುರಿತಾಗಿ ತಲಘಟ್ಟಪುರದ ವಿಜ್ಞಾನಿ ಡಾ.ಎನ್.ಬಿ.ಜ್ಯೋತಿ ಮಾಹಿತಿ ನೀಡಿದರು. ಊಜಿ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತಾಗಿ ವಿಜ್ಞಾನಿ ಡಾ.ಜೆ.ಬಿ.ನರೇಂದ್ರಕುಮಾರ್ ಮಾತನಾಡಿದರು.
ರೇಷ್ಮೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ರೇಷ್ಮೆ ಉಪನಿರ್ದೇಶಕ ಡಿ.ಎಂ.ಆಂಜಿನೇಯ್ಯಗೌಡ, ವಿಸ್ತರಣಾಧಿಕಾರಿ ಎನ್.ಎಂ.ಶಾಂತರಸ, ಡಾ.ರವಿಕುಮಾರ್, ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ನಂಜಪ್ಪ, ಕೆಂಪಣ್ಣ, ಸುರೇಶ್, ಹರೀಶ್, ರಾಮಚಂದ್ರರೆಡ್ಡಿ, ರವಿಪ್ರಕಾಶ್, ಗೋಪಾಲಗೌಡ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.