ಚಿಕ್ಕಬಳ್ಳಾಪುರ: ‘ಮನುಷ್ಯನ ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವಲ್ಲಿ ಕ್ರೀಡೆಯ ಪ್ರಾಮುಖ್ಯ ಬಹಳಷ್ಟಿದೆ. ಕ್ರೀಡೆಯು ಮನಸ್ಸಿಗೆ ಶಾಂತಿ ನೀಡುವ ಜತೆಗೆ ಮನುಷ್ಯನನ್ನು ಉಲ್ಲಾಸದಿಂದ ಇರಿಸುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹೇಳಿದರು.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವೇಶ್ವರಯ್ಯ ಡೈಮಂಡ್ಸ್ ಕ್ಲಬ್ನ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸದೃಢ ದೇಹದಲ್ಲಿ ಆರೋಗ್ಯ ಪೂರ್ಣ ಮನಸ್ಸು ಸದಾ ಜಾಗೃತವಾಗಿರುತ್ತದೆ. ದೈಹಿಕ ಸಂಪತ್ತಿಗೆ ಕ್ರೀಡೆ ಮುಕುಟಮಣಿಯಂತೆ. ಆರೋಗ್ಯ ಮೂಲದ ಗುಟ್ಟು ಅರಿತವರು ಕ್ರೀಡೆಗೆ ಮಹತ್ವ ನೀಡುತ್ತಾರೆ. ಕ್ರೀಡೆಯಿಂದ ಏಕಾಗ್ರತೆ, ಶಿಸ್ತು, ಸಮಯ ಪ್ರಜ್ಞೆ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಕ್ರೀಡೆ ದೈನಂದಿನ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸುವ ಕಲೆ ಕಲಿಸುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಕ್ರಿಯಾಶೀಲರಾಗಿರಲು ಕ್ರೀಡೆ ಬಹುಮುಖ್ಯ. ಗೆದ್ದವರು ಗೆಲುವನ್ನು ಕಾಯ್ದುಕೊಳ್ಳಬೇಕು. ಸೋತವರು ಆತ್ಮವಿಶ್ವಾಸ ಕಳೆದುಕೊಳ್ಳದೆ ಗೆಲ್ಲುವ ಛಲ ಬೆಳೆಸಿಕೊಳ್ಳಬೇಕು. ಗೆಲುವು ಮತ್ತು ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿ ನಮ್ಮದಾಗಬೇಕು’ ಎಂದರು.