ಗೌರಿಬಿದನೂರು: ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕು. ಮನೆಯಲ್ಲಿ ದಿನನಿತ್ಯ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಪಿಎಸ್ಐ ಚಂದ್ರಕಲಾ ತಿಳಿಸಿದರು.
ನಗರದ ಕರೇಕಲ್ಲಹಳ್ಳಿಯಲ್ಲಿ ಕುವೆಂಪು ಗೆಳೆಯರ ಬಳಗದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇವಲ ನವೆಂಬರ್ ತಿಂಗಳಲ್ಲಿ ಕಾರ್ಯಕ್ರಮ ಮಾಡಿ ಮುಗಿಸಿದರೆ ಕನ್ನಡ ಭಾಷೆ ಅಭಿವೃದ್ಧಿಯಾಗದು. ಕನ್ನಡ ಪುಸ್ತಕ ಮತ್ತು ದಿನಪತ್ರಿಕೆಗಳನ್ನು ಓದುವ ಮೂಲಕ ಭಾಷೆಯ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಕುವೆಂಪು ಗೆಳೆಯರ ಬಳಗದ ಮೂರ್ತಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಮಹತ್ವವನ್ನು ಪೋಷಕರು ತಿಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ನಾವು ಒತ್ತು ನೀಡಬೇಕು. ಮಕ್ಕಳಲ್ಲಿ ಮೊಬೈಲ್ ಗೀಳನ್ನು ಪೋಷಕರು ತಪ್ಪಿಸಬೇಕು. ಸಾಧ್ಯವಾದಷ್ಟು ಗ್ರಂಥಾಲಯಗಳಿಗೆ ಭೇಟಿ ನೀಡಿ ಕನ್ನಡ ಭಾಷೆಯ ಪುಸ್ತಕಗಳನ್ನು ಓದುವ ಮೂಲಕ ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ಬಳಗದ ಅಧ್ಯಕ್ಷ ಅನಿಲ್, ನಗರಸಭೆ ಮಾಜಿ ಸದಸ್ಯೆ ಕಲ್ಪನಾ ರಮೇಶ್, ಲಕ್ಷ್ಮೀಮನೋಹರ್, ಮುಖಂಡರಾದ ಆನಂದ್, ಜನಾರ್ದನ್, ಲಕ್ಷ್ಮೀನಾರಾಯಣ್, ರಷೀದ್, ಹನುಮಂತರಾಯಪ್ಪ, ವೆಂಕಟೇಶ್, ಅಗ್ನೇಶಿಯ, ಪದ್ಮಾವತಮ್ಮ ಭಾಗವಹಿಸಿದ್ದರು.