ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕೈವಾರ ಸಮೀಪ ಇತ್ತೀಚೆಗೆ ಉಗ್ರರು ದುಷ್ಕೃತ್ಯಕ್ಕಾಗಿ ತಂದಿದ್ದ ಕಾರು ಅಪಘಾತಕ್ಕೆ ಈಡಾಗಿದೆ ಎಂಬ ವದಂತಿ ಶನಿವಾರ ಕೆಲ ವಾಹಿನಿಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿತು. ಆದರೆ ಇದನ್ನು ಎಸ್ಪಿ ಕೆ.ಸಂತೋಷ್ ಬಾಬು ಅವರು ಅಲ್ಲಗಳೆದರು.
ಆಗಸ್ಟ್ 12 ರಂದು ಕೈವಾರದ ಬಳಿ ಅಪಘಾತಕ್ಕೆ ಈಡಾದ ಸ್ಕೋಡಾ ಕಾರಿನಲ್ಲಿ ಉರ್ದು ಮಾತನಾಡುತ್ತಿದ್ದ ಇಬ್ಬರು ಇದ್ದರು. ಅಪಘಾತವಾದ ಬಳಿಕ ಅವರು ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಾರನ್ನು ಗುಪ್ತಚರ ಇಲಾಖೆ ಐಜಿಪಿ, ಕೇಂದ್ರ ವಲಯ ಐಜಿ, ಉಗ್ರನಿಗ್ರಹ ದಳ ಅಧಿಕಾರಿಗಳು ಮಹಜರು ಮಾಡಿಕೊಂಡು ಹೋಗಿದ್ದಾರೆ. ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಶಂಕಿತರ ರೇಖಾಚಿತ್ರಗಳು ಕಾರಿನಲ್ಲಿ ಇದ್ದವರಿಗೆ ಹೋಲಿಕೆಯಾಗಿವೆ ಎಂದು ವಾಹಿನಿಯೊಂದು ವರದಿ ಮಾಡಿತು.