ಚಿಂತಾಮಣಿ: ನಗರ ಹೊರವಲಯದ ಬೆಂಗಳೂರು- ಕಡಪ ಬೈಪಾಸ್ ರಸ್ತೆಯ ಮುನಗನಹಳ್ಳಿ ಬಳಿ ಶಾಸಕ ಎಂ. ಕೃಷ್ಣಾರೆಡ್ಡಿ ನೂತನವಾಗಿ ನಿರ್ಮಿಸಿರುವ ಜೆಕೆ ಭವನದ ಗೃಹ ಪ್ರವೇಶ ಹಾಗೂ ಜೆಡಿಎಸ್ ಭವನದ ಉದ್ಘಾಟನಾ ಕಾರ್ಯಕ್ರಮವು ಫೆ. 11ರಂದು ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪಕ್ಷದ ಸಂಘಟನೆ, ಕಾರ್ಯಕ್ರಮ ನಡೆಸಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಸೌಲಭ್ಯಗಳನ್ನು ಜನತೆಗೆ ಒದಗಿಸಲು ಶಾಸಕರು ಈ ಭವನ ನಿರ್ಮಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ 4 ರಿಂದ 5 ಗಂಟೆಯೊಳಗೆ ಜೆಕೆ ಭವನದ ಗೃಹಪ್ರವೇಶವನ್ನು ರೂಪಾರೆಡ್ಡಿ ಎಂ. ಕೃಷ್ಣಾರೆಡ್ಡಿ ದಂಪತಿ ನೆರವೇರಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಜೆಡಿಎಸ್ ಕಚೇರಿಯನ್ನು ಎಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ದಂಪತಿ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಪಕ್ಷದ ಸಭಾಂಗಣವನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ರಾಜ್ಯದಲ್ಲಿ ಕೇಂದ್ರ ಸ್ಥಾನ ಬಿಟ್ಟರೆ ಚಿಂತಾಮಣಿಯ ಜೆಡಿಎಸ್ ಭವನ ಎರಡನೆಯದಾಗಿದೆ. ಭವನಕ್ಕೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ.