ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಚರಕಮಟ್ಟೇನಹಳ್ಳಿಯಲ್ಲಿ ಬುಧವಾರ ಸಂಜೆ ಜಮೀನೊಂದರ ಬಳಿ ನಡೆದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಯುವಕನ ಸಂಬಂಧಿಕರು ಜಮೀನಿನ ಮಾಲೀಕನ ಮೇಲೆ ಹಲ್ಲೆ ಮಾಡಿದ್ದು, ಆತ ಕೂಡ ಮೃತಪಟ್ಟಿದ್ದಾರೆ.
ಎರಡು ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ಸಾವಿನಿಂದ ಗುರುವಾರ ಬೆಳಿಗ್ಗೆ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದ್ದಲ್ಲದೆ ಬಿಗುವಿನ ವಾತಾವರಣ ಉಂಟಾಗಿತ್ತು.
ಸ್ಥಳಕ್ಕೆ ಬೆಸ್ಕಾಂ ಎಇಇ ವಿನಯ್ ಭೇಟಿ ನೀಡಿದ್ದರು. ರೈತ ಅಶ್ವತ್ಥ ರಾವ್ ಅವರು ತಮ್ಮ ಜಮೀನಿನಲ್ಲಿದ್ದ ಟೊಮೆಟೊ ಬೆಳೆಯ ರಕ್ಷಣೆಗಾಗಿ ಅಕ್ರಮವಾಗಿ ಅಳವಡಿಕೆ ಮಾಡಿದ್ದ ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಡಿವೈಎಸ್ಪಿ ವಾಸುದೇವ್, ಸಿಪಿಐ ಎಸ್.ಡಿ. ಶಶಿಧರ್ ಹಾಗೂ ಪಿಎಸ್ಐ ವಿಜಯ್ ಕುಮಾರ್ ಭೇಟಿ ನೀಡಿದ್ದರು.
ಗ್ರಾಮದಲ್ಲಿ ಯಾವುದೇ ಅಹಿತಕರ ವಾತಾವರಣ ನಿರ್ಮಾಣವಾಗದಂತೆ ಎಚ್ಚರಿಕೆವಹಿಸಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಸ್ಥಳೀಯರು ಗ್ರಾಮದಲ್ಲಿ ಪೊಲೀಸರ ಚಟುವಟಿಕೆಗಳು ಹಾಗೂ ಬಿಗುವಿನ ವಾತಾವರಣ ಕಂಡು ಗುರುವಾರ ಸಂಜೆಯವರೆಗೂ ಭಯದ ವಾತಾವರಣದಲ್ಲಿಯೇ ದಿನದೂಡುವಂತಾಗಿತ್ತು.