ಚಿಂತಾಮಣಿ: ‘ಪ್ರಜಾಪ್ರಭುತ್ವದಲ್ಲಿ ಮತದಾನ ಬ್ರಹ್ಮಾಸ್ತ್ರವಾಗಿದೆ. ಮತದಾರರು ಚಲಾಯಿಸುವ ಒಂದೊಂದು ಮತವೂ ದೇಶದ ಭವಿಷ್ಯ ರೂಪಿಸುತ್ತದೆ. ಅರ್ಹ ಮತದಾರರು ತಪ್ಪದೆ ಮತದಾನ ಮಾಡಬೇಕು’ ಎಂದು ಪ್ರಾಧ್ಯಾಪಕ ದಿನೇಶ್ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದರು.
ಇಂದಿನ ಯುವಕರೇ ಮುಂದಿನ ಪ್ರಜೆಗಳು. 18 ವರ್ಷ ವಯಸ್ಸಿನ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ನಾವು ಚಲಾಯಿಸುವ ಮತದಾನ ದೇಶದ ಭದ್ರ ಬುನಾದಿಗೆ ಕಾರಣವಾಗುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರಿಂದ ಲೋಕಸಭಾ ಸದಸ್ಯರವರೆಗೂ ಮತದಾನದ ಮೂಲಕವೇ ಆಯ್ಕೆ ಮಾಡಲಾಗುವುದು. ಮತದಾನ ಕುರಿತು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇತ್ತೀಚೆಗೆ ಮತದಾನ ದಿಕ್ಕು ತಪ್ಪುತ್ತಿದೆ. ಮತದಾರರು ಹಣ, ಹೆಂಡ, ಆಸೆ ಅಮಿಷಗಳಿಗೆ ಬಲಿಯಾಗಿ ಮತದಾನ ಮಾಡುವುದು ಸರ್ವೇ ಸಾಮಾನ್ಯವಾಗಿದೆ ಎಂದರು.
ಅಭ್ಯರ್ಥಿಗಳು ಚುನಾವಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗಿದೆ. ಕೋಟ್ಯಧಿಪತಿಗಳು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವಂತಾ ಗಿದೆ. ಇದರಿಂದ ಪ್ರಜಾಪ್ರಭುತ್ವದ ಅಡಿಪಾಯವೇ ಅಲ್ಲಾಡುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲೆ ಡಾ.ಕೆ. ಶಾರದಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಅಶ್ವತ್ಥಪ್ಪ ಮತದಾರರ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಧ್ಯಾಪಕರಾದ ತಿಮ್ಮರಾಯಪ್ಪ, ಚಂದ್ರಶೇಖರ್, ಹನುಮಂತಯ್ಯ, ಸುಗುಣ, ಕವಿತಾ, ಟಿ.ಪಿ. ಜ್ಯೋತಿ ಹಾಜರಿದ್ದರು.