ಶಿಡ್ಲಘಟ್ಟ: ನಗರದಲ್ಲಿ ಸೋಮವಾರದಿಂದ ಬುಧವಾರದವರೆಗೆ ಮೂರು ದಿನ ನಡೆದ ಊರ ಜಾತ್ರೆಗೆ ಆಗಮಿಸಿದ್ದ ವಾಹನ ಸವಾರರಿಗೆ ನಗರದಲ್ಲಿ ಹಲವು ಕಡೆ ಸಂಚಾರ ದಟ್ಟಣೆ ಬಿಸಿ ತಟ್ಟಿತು.
ನಗರದ ದಿಬ್ಬೂಹರಳ್ಳಿ ಬೈಪಾಸ್, ಬಸ್ ನಿಲ್ದಾಣ, ಉಲ್ಲೂರುಪೇಟೆ ಮುಂತಾದ ಕಡೆ ಗಂಟೆಗಟ್ಟಲೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಯಿತು.
ಸುಮಾರು ಹತ್ತು ವರ್ಷಗಳ ನಂತರ ಇಡೀ ನಗರದಲ್ಲಿನ ಎಲ್ಲರೂ ಒಟ್ಟುಗೂಡಿ ಹಬ್ಬದ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಿದರು. ಮೂರು ದಿನ ಊರಲ್ಲಿನ ಎಲ್ಲ ಗ್ರಾಮ ದೇವರುಗಳಿಗೂ ಮನೆ ಮನೆಯಿಂದಲೂ ತಂಬಿಟ್ಟಿನ ಆರತಿ ದೀಪ ಬೆಳಗಲಾಯಿತು. ಊರ ದೇವರ ಮೆರವಣಿಗೆಯನ್ನೂ ನಗರದಲ್ಲಿನ ಎಲ್ಲ ಮುಖ್ಯ ಬೀದಿಗಳಲ್ಲೂ ನಡೆಸಲಾಯಿತು.
ಶಿಡ್ಲಘಟ್ಟ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂಧು ಬಳಗ ಸ್ನೇಹಿತರು ಆಗಮಿಸಿದ್ದು ನೂರಾರು ವಾಹನಗಳು ನಗರಕ್ಕೆ ಲಗ್ಗೆಯಿಟ್ಟಿದ್ದವು. ಊಟದ ಸಮಯ ಮದ್ಯಾಹ್ನವಂತೂ ಒಂದೇ ಸಮಯಕ್ಕೆ ವಾಹನಗಳು ನಗರದೊಳಗೆ ಪ್ರವೇಶಿಸಿದ್ದರಿಂದಾಗಿ ನಗರದ ಆಯಕಟ್ಟಿನ ಸ್ಥಳ, ರಸ್ತೆ, ವೃತ್ತಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಯಿತು.
ಹೊರಗಿನಿಂದ ಬಂದಿದ್ದ ಅತಿಥಿಗಳು, ಬಂಧು ಬಳಗದವರು ತಮ್ಮ ತಮ್ಮ ಕಾರು ಮುಂತಾದ ವಾಹನಗಳಲ್ಲೆ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡು ಪರಿತಪಿಸುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.