ಚಿಕ್ಕಬಳ್ಳಾಪುರ: ಪ್ರತಿ ವರ್ಷದ ಸಂಭ್ರಮದಿಂದ ಜನರು ಆಚರಿಸುತ್ತಿದ್ದ ಯುಗಾದಿ ಹಬ್ಬ ಕೊರೊನಾ ವೈರಸ್ ಸೋಂಕಿನ ತಲ್ಲಣದಿಂದಾಗಿ ಈ ಬಾರಿ ಮನೆಯಲ್ಲಿ ಸರಳವಾಗಿ ಶಾಸ್ತ್ರಕ್ಕೆ ಸಿಮೀತವಾದರೆ, ಯುಗಾದಿ ಮಾರನೆ ದಿನ ಆಚರಿಸುವ ವರ್ಷ ತೊಡಕು ಆಚರಣೆ ಎಂದಿನಂತೆ ನಡೆಯಿತು.
ಮಾರಣಾಂತಿಕ ಸೋಂಕು ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ 21 ದಿನಗಳ ಲಾಕ್ಡೌನ್ ಘೋಷಿಸಿದ್ದೇ, ಜನರು ಮನೆಯ ಒಳಗೆ ಹಬ್ಬ ಆಚರಿಸಬೇಕಾಯಿತು. ಆದರೆ ತೊಡಕು ಆಚರಣೆಯನ್ನು ಜಿಲ್ಲೆಯಲ್ಲಿ ಗುರುವಾರ ಲಾಕ್ಡೌನ್ ನಡುವೆಯೂ ಜನರು ಸಂಭ್ರಮದಿಂದ ಆಚರಿಸಿದರು.
ಗೃಹ ಬಂಧಿಯಾಗಿರುವ ಜನರು ಬುಧವಾರ ಮನೆಯಲ್ಲಿ ಬೇವು -ಬೆಲ್ಲ, ಹೋಳಿಗೆ ಊಟ ತಿಂದು ಯುಗಾದಿ ಆಚರಿಸಿದ್ದರು. ಆದರೆ, ಕಠಿಣ ನಿರ್ಬಂಧದ ನಡುವೆಯೂ ಗುರುವಾರ ಜಿಲ್ಲೆಯಾದ್ಯಂತ ಮಟನ್ ವ್ಯಾಪಾರ ಜೋರಾಗಿಯೇ ಕಂಡುಬಂತು.
ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾದ್ದರಿಂದ ಜನರು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಜತೆಗೆ ಜಗತ್ತನ್ನು ತಲ್ಲಣಕ್ಕೆ ದೂಡಿರುವ ಕೊರೊನಾ ಮಹಾಮಾರಿ ಕೂಡ ಬೇಗ ತೊಲಗಲಿ ಎಂದು ಪೂಜೆ ಸಲ್ಲಿಸಿದರು.