ಚೇಳೂರು: ಕೊರೊನಾ ಸೋಂಕಿನ ಮಧ್ಯೆ ಮಕ್ಕಳು ತರಗತಿಗಳು, ಕಲಿಕೆ ವಿಷಯದಲ್ಲಿ ಹಿಂದುಳಿಯಬಾರದು ರಾಜ್ಯ ಸರ್ಕಾರ ಆರಂಭಿಸಿದ್ದ ವಿದ್ಯಾಗಮ ಯೋಜನೆ ಚೇಳೂರಿನಲ್ಲಿ ಪುನರಾರಂಭವಾಗಿದೆ.
ಹಳ್ಳಿಗಳಲ್ಲಿ ಆನ್ಲೈನ್ ತರಗತಿಗಳಿಗೆ ಕಷ್ಟವಾಗುತ್ತದೆ ಎಂದು ರಾಜ್ಯ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿತ್ತು. ಆದರೆ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ವಿದ್ಯಾಗಮವನ್ನು ಸರ್ಕಾರ ನಿಲ್ಲಿಸಿತ್ತು. ಇದೀಗ, ಕಟ್ಟುನಿಟ್ಟಾನ ಸೂಚನೆಗಳೊಂದಿಗೆ ಚೇಳೂರು ಕರ್ನಾಟಕ ಪಬ್ಲಿಕ್ ಶಾಲೆ ‘ವಿದ್ಯಾಗಮ’ ಆರಂಭಿಸಿದೆ.
ಜಗಲಿಕಟ್ಟೆ, ದೇವಸ್ಥಾನದ ಆವರಣ, ಹಳ್ಳಿ ಮನೆಗಳ ಪಡಸಾಲೆ, ರೈತಾಪಿ ಜನರ ಜಮೀನುಗಳಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಹೇಳಿಕೊಡಲು ‘ವಿದ್ಯಾಗಮ’ ಆರಂಭವಾಗಿತ್ತು. ಕೋವಿಡ್-19ನಿಂದಾಗಿ ಎರಡು ತಿಂಗಳಿಂದ ಯೋಜನೆ ಸ್ಥಗಿತವಾಗಿತ್ತು.
ಇದೀಗ ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ದಂದು ಚೇಳೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಸಿರಿನ ಹುಲ್ಲುನ ಮೇಲೆ ವಿದ್ಯಾಗಮದ ಯೋಜನೆಯಲ್ಲಿ 8ರಿಂದ 10ನೇ ತರಗತಿ ಮಕ್ಕಳಿಗೆ ಬೋಧಿಸಲಾಗುತ್ತಿದೆ.
ಕೆ.ಪಿ.ಎಸ್. ಮುಖ್ಯಶಿಕ್ಷಕರಾದ ಜಿಲಾನ್ಬಾಷ ಮಾತನಾಡಿ, ‘ಸ್ಮಾರ್ಟ್ ಫೋನ್, ಟಿವಿ ಸೌಲಭ್ಯ ಇಲ್ಲದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದಲೂ ಈ ನೂತನ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.
‘ವಿದ್ಯಾಗಮ’ ಪುನರಾರಂಭದ ಕಾರ್ಯಕ್ರಮದಲ್ಲಿ ಚೇಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಹಶಿಕ್ಷಕರಾದ ರಾಮು. ಶಿವಣ್ಣ, ಪಿ.ಜಿ. ವೆಂಕಟರಮಣಾರೆಡ್ಡಿ, ಆಂಜನೇಯರೆಡ್ಡಿ, ನಾಗಮಣಿ, ಪ್ರತಿಮಾ, ಸಿಬ್ಬಂದಿ ಜಿ.ಸುಬ್ಬರಾಯಪ್ಪ, ಬಂಗ್ಲಾ ಬಾಬಾಜಾನ್ ಸಿ.ಗಂಗುಲಪ್ಪ ಹಾಜರಿದ್ದರು.