ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಟು ಬಿಟ್ಟುಕೊಡದ ‘ಬುದ್ಧಿವಂತರು’

ಧರ್ಮ ಸೂಕ್ಷ್ಮ ನೆಲದಲ್ಲಿ ಬಂಡಾಯದ ಬಿಸಿಗೆ ನಲುಗಿವೆ ಕಾಂಗ್ರೆಸ್‌, ಬಿಜೆಪಿ
Last Updated 5 ಮೇ 2018, 19:30 IST
ಅಕ್ಷರ ಗಾತ್ರ

ಹಲವು ಧಾರ್ಮಿಕ ಕ್ಷೇತ್ರಗಳ ನೆಲೆವೀಡು ಎನಿಸಿರುವ ದಕ್ಷಿಣ ಕನ್ನಡಕ್ಕೆ ‘ಬುದ್ಧಿವಂತರ ಜಿಲ್ಲೆ’ ಎಂಬ ಹಣೆಪಟ್ಟಿಯೂ ಇದೆ. ಜೊತೆಗೇ, ಜಿಲ್ಲೆ ಆರ್‌ಎಸ್‌ಎಸ್‌ ‘ಪ್ರಯೋಗ ಶಾಲೆ’ ಎನಿಸಿಕೊಳ್ಳುತ್ತಾ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಧರ್ಮ–ರಾಜಕಾರಣವೇ ವಿಜೃಂಭಿಸುವ ಲಕ್ಷಣಗಳು ಕಾಣಿಸತೊಡಗಿವೆ.

ಕೇಂದ್ರ ಸರ್ಕಾರದ ಅಭಿವೃದ್ಧಿ ಮಂತ್ರ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭಾಗ್ಯಗಳ ಮಂತ್ರ ಉಚ್ಚಾರಣೆಯ ನಡುವೆ ಇಣುಕಿರುವ ಬಂಡಾಯದ ಬಿಸಿ, ಕಾಂಗ್ರೆಸ್‌ ಮತ್ತು ಬಿಜೆಪಿ ಎರಡನ್ನೂ ಸಮಾನವಾಗಿ ನಲುಗಿಸಿಬಿಟ್ಟಿದೆ. ಹಿಂದೂ ವಿರೋಧಿ ಧೋರಣೆ ಎಂಬ ‘ಪ್ರಚಾರ’ ಮತ್ತು ಕೋಮು ರಾಜಕಾರಣ ಎಂಬ ಎರಡು ಪ್ರಮುಖ ವಿಚಾರಗಳು ಉಳಿದೆಲ್ಲ ಸಂಗತಿಗಳನ್ನೂ ಮರೆಮಾಚಿವೆ.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ, ಒಟ್ಟು ಎಂಟು ಸ್ಥಾನಗಳಲ್ಲಿ ಏಳನ್ನು ಕಳೆದುಕೊಂಡು ಮುಖಭಂಗ ಅನುಭವಿಸಿದ್ದ ಬಿಜೆಪಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನೇ ನಂಬಿಕೊಂಡಿದೆ. 2008–13ರ ಅವಧಿಯಲ್ಲಿ ಬಿಜೆಪಿ ಆಡಳಿತದಲ್ಲಿ ಕಂಡಿದ್ದ ಮೂವರು ಮುಖ್ಯಮಂತ್ರಿಗಳ ಪೈಕಿ ಡಿ.ವಿ.ಸದಾನಂದ ಗೌಡ ಇದೇ ಜಿಲ್ಲೆಯವರು. ಆದರೆ ಅವರು ಕಾರ್ಯಕರ್ತರಿಗೆ ‘ನಮ್ಮ ಹೆಮ್ಮೆಯ ನಾಯಕ’ನಾಗಿ ಉಳಿದಿಲ್ಲ. ಅವರು ಕೈಗೆತ್ತಿಕೊಂಡ ಯಾವೊಂದು ಯೋಜನೆಯೂ ಪಕ್ಷದ ನೆರವಿಗೆ ಬಂದಿಲ್ಲ. ಬದಲಿಗೆ ಎತ್ತಿನಹೊಳೆ ಯೋಜನೆಗೆ ಅನುಮತಿ ನೀಡಿದ್ದು ಅವರನ್ನು ಮಾತ್ರವಲ್ಲ, ಪಕ್ಷವನ್ನೂ ಬೇತಾಳದಂತೆ ಬೆಂಬತ್ತಿದೆ. ಇಂತಹ ಸ್ಥಿತಿಯಲ್ಲಿ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಿಂಬಿಸುವ ಪ್ರಯತ್ನಕ್ಕಿಂತಲೂ ಮೋದಿ ಅವರನ್ನು ಬಿಂಬಿಸಿಕೊಂಡು ಸೀಟುಗಳನ್ನು ಹೆಚ್ಚಿಸಿಕೊಳ್ಳುವ ತವಕ ಬಿಜೆಪಿ ವಲಯದಲ್ಲಿ ಕಾಣಿಸುತ್ತಿದೆ. ಕರಾವಳಿ ಭಾಗಕ್ಕೆ ಮೋದಿ ಅವರು ಎರಡೆರಡು ಬಾರಿ ಬಂದಿರುವುದರ ಹಿಂದೆಯೂ ಈ ಲೆಕ್ಕಾಚಾರವಿದೆ.

ಕಾಂಗ್ರೆಸ್‌ಗೆ ರಾಜ್ಯ ಸರ್ಕಾರದ ಸಾಧನೆಗಳೇ ಶ್ರೀರಕ್ಷೆ. ಕಳೆದ ಬಾರಿ ಗೆದ್ದ ಸೀಟುಗಳನ್ನು ಉಳಿಸಿಕೊಳ್ಳುವ ಶಕ್ತಿ ತಮ್ಮ ಪಕ್ಷಕ್ಕಿದೆ ಎಂದೇ ಕಾಂಗ್ರೆಸ್ ನಾಯಕರು ನಂಬಿದ್ದಾರೆ. ಆದರೆ ಇದೇ ಸರ್ಕಾರ ಕೈಗೊಂಡ ಕೆಲವು ನಿರ್ಧಾರಗಳು ಜಿಲ್ಲೆಯಾದ್ಯಂತ ನಿಶ್ಶಬ್ದವಾಗಿ ಕಾಂಗ್ರೆಸ್‌ ವಿರೋಧಿ ಅಲೆಯನ್ನು ಸೃಷ್ಟಿಸಿಬಿಟ್ಟಿ ರುವುದೂ ಸುಳ್ಳಲ್ಲ. ಕೆಲವು ಕೊಲೆಗಳು ರಾಜಕೀಯ ತಿರುವು ಪಡೆದುಕೊಂಡ ಬಳಿಕ, ರಾಜ್ಯದಲ್ಲೇ ಮತ್ತೊಮ್ಮೆ ಕೋಮುಸೂಕ್ಷ್ಮ ಜಿಲ್ಲೆಯಾಗಿ ಬದಲಾಗಿಬಿಟ್ಟಿತು. ಇದಕ್ಕೆ ಪೂರಕ ಎಂಬಂತೆ, ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಬಿಸಿಯೂಟದ ಅನುದಾನ ಕಡಿತ
ಗೊಳಿಸಲಾಯಿತು. ನಿರೀಕ್ಷಿತವಾಗಿ ಇದಕ್ಕೆ ವ್ಯಾಪಕ ಪ್ರಚಾರವೂ ದೊರೆಯಿತು. ಅಕ್ರಮ ಗೋಸಾಗಣೆ ಪ್ರಕರಣಗಳೂ ಹಲವು ಬಾರಿ ರಾಜಕೀಯ ತಿರುವು ಪಡೆದುಕೊಂಡಿವೆ. ಕೋಮು ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿವೆ. ಇಂತಹ ಸಂಘರ್ಷಗಳನ್ನು ನಿಭಾಯಿಸಿದ ಬಗೆಗೆ ಜನರಲ್ಲಿ ಸಿಟ್ಟಿದೆ.

ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿರುವ ಬಿಲ್ಲವರಿಗೆ ಟಿಕೆಟ್‌ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ಕೂಗು ಬಿಜೆಪಿ ಮತ್ತು ಕಾಂಗ್ರೆಸ್‌ ವಲಯಗಳಲ್ಲಿ ಕೇಳಿ
ಬಂದಿದ್ದರೂ, ಬಂಡಾಯದ ರೂಪ ತಳೆದುದು ಬಿಜೆಪಿಯಲ್ಲಿ. ಮತ್ತೊಂದೆಡೆ, ಒಂದು ಕಾಲಕ್ಕೆ ಮೂಲೆಗುಂಪಾಗಿದ್ದ ಬಿಲ್ಲವ ಸಮುದಾಯದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಸಂತುಷ್ಟಗೊಳಿಸುವ ಕೆಲಸ ಕಾಂಗ್ರೆಸ್‌ನಿಂದ ನಡೆದಿದೆ. ಮತ ವಿಭಜನೆಯ ಮೂಲಕ ಪೆಟ್ಟು ಕೊಡಬಹುದು ಎಂಬ ಲೆಕ್ಕಾಚಾರದೊಂದಿಗೆ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಎಸ್‌ಡಿಪಿಐ ಅಭ್ಯರ್ಥಿಯೂ ಕಣದಲ್ಲಿ ಇರದಂತೆ ನೋಡಿಕೊಳ್ಳಲಾಗಿದೆ. ಕಾಂಗ್ರೆಸ್‌ನ ಈ ಎಲ್ಲ ಲೆಕ್ಕಾಚಾರದ ನಡೆಯನ್ನು ತಡೆಗಟ್ಟುವುದಕ್ಕೆ ಹಿಂದೂ ಕಾರ್ಡ್‌ ಬಳಕೆಯಷ್ಟೇ ಪರಿಹಾರ ಎಂದು ಸಂಘ ಪರಿವಾರ ಕಂಡುಕೊಂಡಂತಿದೆ. ಹೀಗಾಗಿಯೇ ಚುನಾವಣೆಯಲ್ಲಿ ಬಾಹ್ಯ ಬಿರುಸಿಗಿಂತಲೂ ಆಂತರಿಕ ಲೆಕ್ಕಾಚಾರದ ನಡೆ ಮುಖ್ಯ ಪಾತ್ರ ವಹಿಸುವ ಸಾಧ್ಯತೆ ಇದೆ.

ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಎದುರಾಳಿ ಬಿಜೆಪಿ. ಜೆಡಿಎಸ್ ಮತ್ತು ಸಿಪಿಎಂ ಅಭ್ಯರ್ಥಿಗಳು ಕಣದಲ್ಲಿದ್ದರೂ ಇತರರ ನಿದ್ದೆಗೆಡಿಸುವ ಸ್ಥಿತಿಯಲ್ಲಿ ಇಲ್ಲ. ಆದರೆ ಎಸ್‌ಡಿಪಿಐ ಕಣದಿಂದಲೇ ನಿರ್ಗಮಿಸಿದ್ದರಿಂದ ಈ ಬಾರಿಯ ಫಲಿತಾಂಶದಲ್ಲಿ ಸಾಕಷ್ಟು ಏರುಪೇರು ಆಗಬಹುದೇ ಎಂಬ ಲೆಕ್ಕಾಚಾರ ಶುರುವಾಗಿದೆ. ಏಕೆಂದರೆ, 2013ರಲ್ಲಿ ಮಂಗಳೂರು ಕ್ಷೇತ್ರದಲ್ಲಿ ಎಸ್‌ಡಿಪಿಐ ಮತ ಗಳಿಕೆಯಲ್ಲಿ (4,808) 3ನೇ ಸ್ಥಾನದಲ್ಲಿತ್ತು. ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಅಂತರ 4,289 ಆಗಿತ್ತು. ಅಲ್ಲಿ ಎಸ್‌ಡಿಪಿಐ 4,442 ಮತ ಗಳಿಸಿತ್ತು. ಸುಳ್ಯದಲ್ಲಿ ಕಾಂಗ್ರೆಸ್‌ ಸೋಲಿನ ಅಂತರ 1,373 ಆಗಿತ್ತು. ಎಸ್‌ಡಿಪಿಐ 2,569 ಮತ ಗಳಿಸಿತ್ತು!

ಅಭ್ಯರ್ಥಿಗಳ ವಯಸ್ಸನ್ನು ಗಮನಿಸಿದಾಗ, ಬಿಜೆಪಿಯಲ್ಲಿ ನಾಲ್ಕು ಹೊಸ ಮುಖಗಳ ಸಹಿತ‌ ಬಹುತೇಕ ಮಂದಿ ಯುವಕರು ಅಥವಾ ಮಧ್ಯ ವಯಸ್ಕರು. ಆದರೆ ಕಾಂಗ್ರೆಸ್‌ನಲ್ಲಿ 60 ವರ್ಷ ಮೇಲ್ಪಟ್ಟವರೇ ಬಹುತೇಕರು. ಏಳು ಹಾಲಿ ಶಾಸಕರ ಸಹಿತ ಕಳೆದ ಬಾರಿ ಸ್ಪರ್ಧಿಸಿದ್ದ ಎಲ್ಲ ಎಂಟೂ ಮಂದಿ ಟಿಕೆಟ್‌ ಪಡೆದಿದ್ದಾರೆ. ಬೆಳ್ತಂಗಡಿಯಲ್ಲಿ ವಸಂತ ಬಂಗೇರ, ಮೂಡುಬಿದಿರೆಯಲ್ಲಿ ಅಭಯಚಂದ್ರ ಜೈನ್‌ ಅವರನ್ನು ಸಿದ್ದರಾಮಯ್ಯ ಅವರೇ ಒತ್ತಾಯ ಮಾಡಿ ಮತ್ತೆ ಕಣಕ್ಕೆ ಇಳಿಸಿದ್ದಾರೆ. ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಕಂಡುಕೊಂಡ ದಾರಿಯೂ ಅದಾಗಿತ್ತು.

ಮೋದಿ ಅಲೆ, ಆಡಳಿತ ವಿರೋಧಿ ಅಲೆಗಳನ್ನು ಎದುರಿಸಿ, ಏಳು ಸ್ಥಾನಗಳನ್ನು ಉಳಿಸಿಕೊಳ್ಳುವ ಒತ್ತಡದಲ್ಲಿ ಕಾಂಗ್ರೆಸ್‌ ಇದ್ದರೆ, ಬಂಡಾಯವನ್ನು ಬದಿಗೊತ್ತಿ ಗರಿಷ್ಠ ಸ್ಥಾನ ಕಸಿದುಕೊಳ್ಳುವ ತವಕ ಬಿಜೆಪಿಯಲ್ಲಿ ಕಾಣಿಸುತ್ತಿದೆ. ಎತ್ತಿನಹೊಳೆ ಯೋಜನೆ ವಿರುದ್ಧದ ನೋಟಾ ಅಭಿಯಾನ, ಸಿಪಿಎಂ, ಜೆಡಿಎಸ್‌ ಗಳಿಸುವ ಮತಗಳು ‘ಪವಾಡ’ ಸೃಷ್ಟಿಸದೇ ಹೋದರೆ, ಕಾಂಗ್ರೆಸ್‌–ಬಿಜೆಪಿ ನಡುವೆಯೇ ನೇರ ಹಣಾಹಣಿ ನಿಶ್ಚಿತ.

* ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವ ಜಿಲ್ಲೆಯಲ್ಲಿ, ಪ್ರವಾಸೋದ್ಯಮದ ಅಭಿವೃದ್ಧಿಗೆ ಗಮನ ಹರಿಸಬೇಕಿದೆ. ಜಿಲ್ಲೆಯ ಜನರು ಪ್ರಬುದ್ಧರಾಗಿದ್ದು, ಒಳ್ಳೆಯವರಿಗೆ ಮತ ನೀಡಬೇಕಿದೆ.

–ಮನೋಹರ್‌, ಗ್ಯಾರೇಜ್‌ ಮೆಕ್ಯಾನಿಕ್‌, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT