ಚಿಕ್ಕಬಳ್ಳಾಪುರ: ಸಮಾಜಮುಖಿ ಕೆಲಸಗಳಿಂದಲೇ ಚಿಕ್ಕಬಳ್ಳಾಪುರದಲ್ಲಿ ಡಾ.ಸುಷ್ಮಾ ಪರಿಚಿತರು. ಚಿಕ್ಕಬಳ್ಳಾಪುರದ ರಂಗಸ್ಥಳ ದೇವಸ್ಥಾನದ ಸಮೀಪಮಾನಸ ಆಶ್ರಮ ನಡೆಸುತ್ತಿರುವ ಡಾ.ಸುಷ್ಮಾ ಅವರ ಕಾರ್ಯಗಳು ಪ್ರಶಂಸೆಗೆ ಪಾತ್ರವಾಗಿವೆ. ಈ ಆಶ್ರಮದಲ್ಲಿ ಕುಟುಂಬಗಳಿಂದ ದೂರವಾದ, ಅನಾಥ 25 ವೃದ್ಧರು ಆಶ್ರಯ ಪಡೆದಿದ್ದಾರೆ. ವೃದ್ಧಾಶ್ರಮವನ್ನು 1 ಎಕರೆಯಲ್ಲಿ ನಿರ್ಮಿಸಲಾಗಿದೆ.
ನಗರದ ಮಾನಸ ಆಸ್ಪತ್ರೆಯ ಡಾ.ಎಚ್.ಎಸ್. ಮಧುಕರ್ ಮತ್ತು ಡಾ.ಸುಷ್ಮಾ ದಂಪತಿ ಮಾನಸ ಮೆಡಿಕಲ್ ಟ್ರಸ್ಟ್ ಮೂಲಕ ಜಿಲ್ಲಾ ಆಸ್ಪತ್ರೆಯ ಹೊರರೋಗಿಗಳು, ಬಡರೋಗಿಗಳ ಚಿಕಿತ್ಸೆಗಾಗಿ ಅವರ ಜತೆ ಬರುವ ಕುಟುಂಬ ಸದಸ್ಯರಿಗೆ ಉಚಿತ ಊಟ ಸಹ ವಿತರಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಸುಷ್ಮಾ ಅವರದ್ದು ಪ್ರಧಾನ ಪಾತ್ರ.
‘ಅನ್ನಪೂರ್ಣ’ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಆಹಾರ ನೀಡುತ್ತಿರುವ ಈ ಕಾರ್ಯಕ್ರಮ ಒಂದು ವರ್ಷದಿಂದ ಚಾಲನೆಯಲ್ಲಿದೆ. ಇಲ್ಲಿಯವರೆಗೆ 50,000ಕ್ಕೂ ಹೆಚ್ಚು ಊಟವನ್ನು ವಿತರಿಸಲಾಗಿದೆ. ಸುಷ್ಮಾ ಅವರ ಈ ಕಾರ್ಯಕ್ಕಾಗಿ ಅವರನ್ನು ಹಲವು ಸಂಘ, ಸಂಸ್ಥೆಗಳು ಗೌರವಿಸಿವೆ.
ಅನ್ನಪೂರ್ಣ ಯೋಜನೆ ಮತ್ತು ವೃದ್ಧಾಶ್ರಮಕ್ಕೆ ಉದಾರ ಮನಸ್ಸುಳ್ಳವರ ಸಹಕಾರವೂ ಇದೆ. ಆದರೆ, ತಿಂಗಳ ಕೊನೆಯಲ್ಲಿ ಎದುರಾಗುವ ಹಣದ ಕೊರತೆಯನ್ನು ಸುಷ್ಮಾ ಹಾಗೂ ಅವರ ಪತಿ ಮಧುಕರ್ ವೈಯಕ್ತಿಕ ಆದಾಯದಿಂದ ಭರಿಸುತ್ತಿದ್ದಾರೆ.