ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬೇಸಿಗೆಗೆ ಬಸವಳಿದ ನಗರವಾಸಿಗಳು

ಮುಖ ತೋರಿಸಿ ಮರೆಯಾದ ಮಳೆರಾಯ, ಕಾದ ಕಾವಲಿಯಾದ ಭೂಮಿ, ದಾಹ ತಣಿಸಿಕೊಳ್ಳಲು ಹಣ್ಣಿನ ಮೊರೆ
Last Updated 2 ಏಪ್ರಿಲ್ 2018, 12:35 IST
ಅಕ್ಷರ ಗಾತ್ರ

ಕೋಲಾರ: ನೆತ್ತಿ ಮೇಲೆ ಸುಡು ಬಿಸಿಲು... ಕಾದ ಹೆಂಚಾಗಿರುವ ಇಳೆ... ಮುಖ ತೋರಿಸಿ ಮರೆಯಾದ ಮಳೆ ರಾಯ... ರಾತ್ರಿಯಲ್ಲೂ ಬಿಸಿಯ ಅನುಭವ... ಇದರ ನಡುವೆ ವಿದ್ಯುತ್‌ ಕಣ್ಣಾಮುಚ್ಚಾಲೆ...ಹೌದು, ನಗರದಲ್ಲಿ ಈಗ ಬೇಸಿಗೆಯ ಬಿಸಿ ತೀವ್ರಗೊಂಡಿದೆ. ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಬಿರು ಬೇಸಿಗೆಯು ನಗರವಾಸಿಗಳನ್ನು ಹೈರಾಣಾಗಿಸಿದೆ. ಕೆಲ ದಿನಗಳ ಹಿಂದೆ ಪ್ರತ್ಯಕ್ಷವಾಗಿದ್ದ ವರುಣ ದೇವ ಮತ್ತೆ ಮುಖ ತೋರಿಸಿಲ್ಲ. ದಿನದಿಂದ ದಿನಕ್ಕೆ ಬಿಸಿಲ ಝಳ ಏರುತ್ತಿದ್ದು, ಮರ ಗಿಡಗಳ ಕೆಳಗೂ ತಣ್ಣನೆಯ ಗಾಳಿ ಇಲ್ಲ.

ಬೆಳಿಗ್ಗೆಯಿಂದಲೇ ಆರಂಭವಾಗುವ ಸೆಕೆಯ ಅನುಭವ ಸಮಯ ಕಳೆದಂತೆ ಹೆಚ್ಚುತ್ತ ಹೋಗುತ್ತದೆ. ಬೇಸಿಗೆ ಕಾರಣಕ್ಕೆ ಫ್ಯಾನ್‌, ಹವಾ ನಿಯಂತ್ರಿತ ಉಪಕರಣ (ಎ.ಸಿ) ಹಾಗೂ ಏರ್‌ ಕೋಲರ್‌ಗಳಿಗೆ ಈಗ ಬಿಡುವಿಲ್ಲದ ಕೆಲಸ.ಹಿಂದಿನ ವರ್ಷದ ಬೇಸಿಗೆಗೆ ಹೋಲಿಸಿದರೆ ನಗರದಲ್ಲಿ ಈ ಬಾರಿ ತಾಪಮಾನ ಗಣನೀಯವಾಗಿ ಹೆಚ್ಚಿದೆ. ನಗರದೊಳಗಿನ ಹಾಗೂ ಸುತ್ತಮುತ್ತಲಿನ ಕೆರೆ ಕುಂಟೆ, ತೆರೆದ ಬಾವಿಗಳಲ್ಲಿ ನೀರಿದ್ದರೂ ವಾತಾವರಣದಲ್ಲಿ ಉಷ್ಣತೆ ಪ್ರಮಾಣ ಏರಿಕೆಯಾಗಿದೆ. ಇದರ ಜತೆಗೆ ವಾಹನಗಳ ಹೊಗೆ, ರಸ್ತೆಯಲ್ಲಿನ ದೂಳಿನಿಂದ ನಗರದ ಜೀವನ ಮತ್ತಷ್ಟು ಅಸಹನೀಯವಾಗಿದೆ.

ಹೆಚ್ಚದ ನೀರಡಿಕೆ: ಬೇಸಿಗೆ ಕಾರಣಕ್ಕೆ ನೀರಡಿಕೆ ಹೆಚ್ಚಿದ್ದು, ನಗರದಲ್ಲಿ ಮಜ್ಜಿಗೆ, ಎಳನೀರು, ಐಸ್‌ಕ್ರೀಮ್‌, ಕಬ್ಬಿನ ಹಾಲು, ತಂಪು ಪಾನೀಯಗಳ ವಹಿವಾಟು ಭರ್ಜರಿಯಾಗಿದೆ. ಮಜ್ಜಿಗೆ, ಎಳನೀರು, ಹಣ್ಣಿನ ರಸ, ಐಸ್‌ ಕ್ರೀಮ್‌, ಹಣ್ಣಿನ ಅಂಗಡಿಗಳಲ್ಲಿ ಜನಜಾತ್ರೆ. ಬಡಾವಣೆಗಳಲ್ಲಿ ಐಸ್‌ ಕ್ಯಾಂಡಿ. ಐಸ್‌ಕ್ರೀಮ್‌ ವ್ಯಾಪಾರಿಗಳಿಗೆ ಬಿಡುವಿಲ್ಲದ ದುಡಿಮೆ.

ನಗರವಾಸಿಗಳು ಬಾಯಾರಿಕೆಯಿಂದ ಪಾರಾಗಲು ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ, ಸೌತೆ ಕಾಯಿ, ಮೋಸಂಬಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಬಸ್‌ ಮತ್ತು ರೈಲು ನಿಲ್ದಾಣದ ಬಳಿ, ಪಾದಚಾರಿ ಮಾರ್ಗದಲ್ಲಿ, ಪ್ರಮುಖ ರಸ್ತೆಗಳ ಅಕ್ಕಪಕ್ಕ, ಮಾರುಕಟ್ಟೆಗಳ ಸಮೀಪ ಹಾಗೂ ಸರ್ಕಾರಿ ಕಚೇರಿ ಬಳಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಫ್ಯಾನ್‌, ಎ.ಸಿ ಹಾಗೂ ಏರ್‌ ಕೋಲರ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಎಲೆಕ್ಟ್ರಾನಿಕ್‌ ಉಪಕರಣ ಮಾರಾಟ ಮಳಿಗೆಗಳಲ್ಲಿ ಜನವೋ ಜನ. ನೈಸರ್ಗಿಕ ಫ್ರಿಡ್ಜ್‌ ಎಂದೇ ಹೆಸರಾಗಿರುವ ಮಡಿಕೆ ಖರೀದಿಸಲು ಜನ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಕುಡಿಯುವ ನೀರಿನ ಬಾಟಲಿ ಹಾಗೂ ಪೊಟ್ಟಣಗಳ ವಹಿವಾಟು ವೃದ್ಧಿಸಿದೆ. ಮಹಿಳೆಯರು ಬಿಸಿಲಿನಿಂದ ಸಾಧ್ಯವಾದಷ್ಟು ಪಾರಾಗಲು ತಲೆ ಮತ್ತು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುವ ದೃಶ್ಯ ಸಾಮಾನ್ಯವಾಗಿದೆ.

ಬೆಲೆ ಏರಿಕೆ: ನಗರದ ಮಾರುಕಟ್ಟೆಯಲ್ಲಿ ಫೆಬ್ರುವರಿಯಲ್ಲಿ ಕಲ್ಲಂಗಡಿ ಹಣ್ಣಿನ ಬೆಲೆ ಕೆ.ಜಿಗೆ ₹ 12 ಇತ್ತು. ಬಿಸಿಲ ತಾಪ ಹೆಚ್ಚಿದಂತೆ ಕಲ್ಲಂಗಡಿ ಬೆಲೆ ₹ 20ಕ್ಕೆ ಏರಿಕೆಯಾಗಿದೆ. ಅದೇ ರೀತಿ ದ್ರಾಕ್ಷಿ ಹಣ್ಣಿನ ಬೆಲೆ ₹ 80ರಿಂದ ₹ 100, ಮೋಸಂಬಿ ₹ 60ರಿಂದ ₹ 80, ಕಿತ್ತಳೆ ಹಣ್ಣಿನ ಬೆಲೆ ₹ 60ರಿಂದ ₹ 80ಕ್ಕೆ ಜಿಗಿದಿದೆ. ತರಕಾರಿ ಹಾಗೂ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ.

ಹೋಟೆಲ್‌ಗಳಲ್ಲಿ ಮೊಸರನ್ನಕ್ಕೆ ಬೇಡಿಕೆ ಹೆಚ್ಚಿದೆ. ಮನೆಗಳಲ್ಲಿ ಟೀ–ಕಾಫಿ ಬದಲಿಗೆ ನಿಂಬೆ ಹಣ್ಣಿನ ಜ್ಯೂಸ್‌, ಪಾನಕ, ಮಜ್ಜಿಗೆ ಸೇವನೆ ಹೆಚ್ಚಿದೆ. ಮೇ ಅಂತ್ಯದವರೆಗೂ ಬೇಸಿಗೆ ಮುಂದುವರಿಯಲಿದ್ದು, ನಗರವಾಸಿಗಳು ಇನ್ನೂ ಎರಡು ತಿಂಗಳು ಬೇಸಿಗೆಯ ಬಿಸಿ ಅನುಭವಿಸಬೇಕಿದೆ.

**

ಬಿಸಿಲ ತಾಪ ಹೆಚ್ಚಿರುವುದರಿಂದ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ಅನುಗುಣವಾಗಿ ಹಣ್ಣಿನ ಬೆಲೆಯೂ ಏರಿಕೆಯಾಗಿದೆ. ಆದರೆ ಮಾರಾಟ ಕಡಿಮೆ ಇಲ್ಲ – ಮಂಜುನಾಥ್‌ಗೌಡ,ಕಲ್ಲಂಗಡಿ ಹಣ್ಣು ವ್ಯಾಪಾರಿ

**

ಕುಟುಂಬದ ಸದಸ್ಯರೆಲ್ಲಾ ದ್ರವ ರೂಪದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದೇವೆ. ಮಕ್ಕಳು ಕಲ್ಲಂಗಡಿ ಹಣ್ಣು ಮತ್ತು ತಂಪು ಪಾನೀಯ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ – ಅನುರಾಧಾ, ನಗರವಾಸಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT