ಶೃಂಗೇರಿ: ಪಟ್ಟಣದ ಅಭಿವೃದ್ಧಿಗಾಗಿ ಸದಾ ನಾನು ಸಿದ್ಧನಾಗಿದ್ದು, ಈಗಾಗಲೇ ಹಲವಾರು ಯೋಜನೆಗಳನ್ನು ಪಟ್ಟಣಕ್ಕೆ ನೀಡಲಾಗಿದೆ. ಗಾಂಧಿ ಮೈದಾನದ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಾಣ ಮಾಡಲು ಅನುದಾನಗಳನ್ನು ಕ್ಲಪ್ತಕಾಲದಲ್ಲಿ ತರಲಾಗುವುದು ಎಂದು ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶೃಂಗೇಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಶಾಸಕರಿದ್ದ 13 ವರ್ಷಗಳ ಅವಧಿಯಲ್ಲಿ ವಸತಿ ರಹಿತರಿಗೆ ಸೂರು ನೀಡಲು ವಿಫಲವಾಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಇದರಿಂದ ತೀವ್ರ ತೊಂದರೆಯಾಗಿದ್ದು, ಮುಂಬರುವ ದಿನಗಳಲ್ಲಿ ಮನೆ ಹಾಗೂ ನಿವೇಶನ ಕಲ್ಪಿಸಿಕೊಡಲಾಗುವುದು. ತುಂಗಾನದಿಗೆ ತ್ಯಾಜ್ಯ ವಸ್ತುಗಳು ಹೆಚ್ಚು ಸೇರುತ್ತಿದ್ದು ಸಮಗ್ರ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಜಾರಿಗೊಳಿಸುವ ಮುಖಾಂತರ ನದಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲಾಗುವುದು ಎಂದರು.
ರಸ್ತೆಯ ಎರಡು ಬದಿಯಿಂದ ಚರಂಡಿಗಳಿಗೆ ಇಂಟರ್ ಲಾಕ್ ಹಾಗೂ ಭೂಗತ ಕೇಬಲ್ ಅಳವಡಿಸುವ ಮೂಲಕ ದೂಳು ರಹಿತ ಪಟ್ಟಣವನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು. ಮೆಣಸೆಯಲ್ಲಿ ಕೆಎಸ್ಆರ್ಟಿಸಿ ಡಿಪೋ, ಗಾಂಧಿ ಮೈದಾನದಲ್ಲಿನ ಸುಸಜ್ಜಿತ ಸರ್ಕಾರಿ ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣ, ಹೈಟೆಕ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.
ಯುವಕರಿಗೆ ಉದ್ಯೋಗ ಸೃಷ್ಠಿ ಹಾಗೂ ಪಟ್ಟಣದ ಚಂದ್ರಶೇಖರ ಸ್ವಾಮೀಜಿ ಅವರು ಶಿಕ್ಷಣ ಪಡೆದ ಸರ್ಕಾರಿ ಬಾಲಕರ ಶಾಲೆಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಪಟ್ಟಣದ ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಸಂಜೆ ವೇಳೆಯಲ್ಲೂ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ ‘ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ನೀಡಲಿಲ್ಲ. ಆದರೂ ಅವರು ಮೋದಿ ಹೆಸರಿನಲ್ಲಿ ಜಯಗಳಿಸಿದ್ದಾರೆ. ಸಂಸದರಿಗೆ ಜನರು ಕಿವಿಹಿಂಡುವ ಮೂಲಕ ಕ್ಷೇತ್ರಕ್ಕೆ ಬರುವಂತೆ ಮಾಡಬೇಕು. ಕೇಂದ್ರ ಸರ್ಕಾರದಲ್ಲಿ ಅವರು ಐದು ವರ್ಷಗಳ ಕಾಲ ಮಲೆನಾಡಿನ ಜನರ ಸಮಸ್ಯೆ ಹಾಗೂ ಅಭಿವೃದ್ಧಿಗೆ ಶ್ರಮಿಸಲಿ’ ಎಂದರು.
ಎಐಸಿಸಿ ಕಾರ್ಯದರ್ಶಿ ಸಂದೀಪ್ ಮಾತನಾಡಿ, ‘ಅಭ್ಯರ್ಥಿಗಳು ಪಕ್ಷದ ವರ್ಚಸ್ಸಿನಿಂದ ಗೆಲ್ಲಬೇಕಾಗಿದೆ. ಅಡಿಕೆ, ಕಾಫಿ ಬೆಳೆಗಾರರಿಗೆ ಕೇಂದ್ರ ಸರ್ಕಾರವು ಸ್ಪಂದಿಸಬೇಕು. ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿ ಮುಂತಾದ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೂಡಿಗೆ ನಟರಾಜ್, ತಾಲ್ಲೂಕು ಮಹಿಳಾ ಅಧ್ಯಕ್ಷೆ ಶಕೀಲಾ ಗುಂಡಪ್ಪ, ಕಾಂಗ್ರೆಸ್ ಮುಖಂಡ ದಿನೇಶ್ ಶೆಟ್ಟಿ, ಶಿವಮೂರ್ತಿ, ತ್ರಿಮೂರ್ತಿ, ಉಮೇಶ್ ಪೊದುವಾಳ್ ಉಪಸ್ಥಿತರಿದ್ದರು.