ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ನಗರಸಭೆ ಆವರಣದಲ್ಲಿ ನೈರ್ಮಲ್ಯ ಕೊರತೆ,ಪಾಳು ಬಿದ್ದಿರುವ ಹೂಕುಂಡ ಮಂಟಪ

Last Updated 5 ಮೇ 2019, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ದೀಪದ ಕೆಳಗೆ ಕತ್ತಲು’ ಎನ್ನುವ ನಾಣ್ಣುಡಿಯಂತೆ ನಗರದ ಸ್ವಚ್ಛತೆ ಜವಾಬ್ದಾರಿ ಹೊಂದಿರುವ ನಗರಸಭೆಯ ಆವರಣದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ.

‘ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ, ಕಸದ ಸಂಗ್ರಹಣ ವಾಹನಕ್ಕೆ ಕಸ ನೀಡಿ’ ಎಂದು ಪ್ರಚಾರ ಮಾಡುವ ನಗರಸಭೆಯ ಕಟ್ಟಡಗಳ ಹಿಂದೆ ಕಸದ ರಾಶಿ ಬಿದ್ದಿದೆ. ಅದರಲ್ಲಿ ಕಾಫಿ ಲೋಟ, ರಟ್ಟಿನ ತುಂಡುಗಳು, ಉಪಯೋಗಿಸಿದ ಹಾಳೆಗಳು, ಎನ್ವಲಪ್ ಕವರ್‌ಗಳು, ಆಮಂತ್ರಣ ಪತ್ರಿಕೆಗಳು ಬಿದ್ದಿವೆ. ಆವರಣದಲ್ಲಿ ಕೆಲವು ಕಡೆ ತರಗಿನ ರಾಶಿ ಹಾಕಲಾಗಿದೆ. ಉದ್ಯಾನದೊಳಗೆ ಅಲ್ಲಲ್ಲಿ ಕಸ ಇದೆ.

ಆವರಣದಲ್ಲಿ ದುರಸ್ತಿ ಕಾಣದೇ ವರ್ಷಗಳಿಂದ ನಿಂತಲ್ಲಿಯೇ ನಿಂತಿರುವ ಜೆಸಿಬಿ, ಟ್ರ್ಯಾಕ್ಟರ್‌ ಟ್ರಾಲಿಗಳು, ತಳ್ಳು ಗಾಡಿಗಳು ತುಕ್ಕು ಹಿಡಿದಿವೆ. ಅವುಗಳ ಮೇಲೆ ಮತ್ತು ಸುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ. ಪಕ್ಕದಲ್ಲಿ ಹೂ ಕುಂಡಗಳನ್ನು ಇಡಲು ನಿರ್ಮಿಸಿರುವ ಮೆಟ್ಟಿಲುಗಳ ಮಂಟಪ ಇದ್ದು, ಪಾಳು ಬಿದ್ದಿದೆ.

ನಗರಸಭೆ ಕಚೇರಿ ಕಟ್ಟಡದ ಹಿಂಬಾಗದಲ್ಲಿ ಸಾರ್ವಜನಿಕ ಶೌಚಾಲಯ ಇದೆ. ಹೊಸಬರಿಗೆ ಅದು ಗೋಚರಿಸುವುದಿಲ್ಲ. ಮಹಿಳೆಯರ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಪುರುಷರ ಶೌಚಾಲಯದಲ್ಲಿ ನೀರಿನ ಕೊರತೆ ಇದ್ದು, ದುರ್ವಾಸನೆಯಿಂದ ಕೂಡಿದೆ.

ನಗರಸಭೆ ಆವರಣದಲ್ಲಿ ಸಾಮಾನ್ಯವಾಗಿ ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳು ಬಾಕ್ಸ್‌ನಲ್ಲಿ ತಂದಿರುವ ಆಹಾರ ಸೇವಿಸುತ್ತಾರೆ. ಅದರ ತ್ಯಾಜ್ಯಗಳನ್ನು ಅಲ್ಲೆ ಬಿಸಾಕುತ್ತಾರೆ. ಅದನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸುವುದಿಲ್ಲ. ರಜೆ ದಿನಗಳಂದು ನಗರಸಭೆಯ ಕಟ್ಟಡಗಳ ಹಿಂದೆ ಸರ್ಕಾರಿ ವಾಹನ ನಿಲ್ಲಿಸಿಕೊಂಡು ಕೆಲ ನೌಕರರು ಮದ್ಯಪಾನ ಮಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಗಾಂಧಿ ನಗರದ ನಿವಾಸಿ ಮಂಜುನಾಥ್ ಆಗ್ರಹಿಸಿದರು.

ನಗರಸಭೆ ಎಂದರೆ ಸ್ವಚ್ಛ ವಾತಾವರಣ, ಸುಂದರ ಉದ್ಯಾನ, ಮೂಲ ಸೌಕರ್ಯಗಳ ವ್ಯವಸ್ಥೆ ಇರುತ್ತದೆ ಎನ್ನುವ ಕಲ್ಪನೆ ಜನರಿಗೆ ಇರುತ್ತದೆ. ಆದರೆ, ಚಿಕ್ಕಮಗಳೂರಿನ ನಗರಸಭೆ ಅದಕ್ಕೆ ತದ್ವಿರುದ್ಧವಾಗಿದೆ. ಆವರಣದಲ್ಲಿ ಶುಚಿತ್ವ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆ ಇದೆ ಎಂದು ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ದೂರಿದರು.

ನಗರಸಭೆಯ ಆವರಣದಲ್ಲಿ ನೈರ್ಮಲ್ಯ ಕಾಪಾಡಲು, ಉದ್ಯಾನ ಮತ್ತು ಶೌಚಾಲಯ ನಿರ್ವಹಣೆ ಮಾಡಲು ಪ್ರತ್ಯೇಕವಾಗಿ ನೌಕರರನ್ನು ನಿಯೋಜಿಸಬೇಕು. ತುಕ್ಕು ಹಿಡಿಯುತ್ತಿರುವ ನಗರಸಭೆ ವಾಹನಗಳನ್ನು ಹರಾಜು ಹಾಕಬೇಕು ಎಂದು ಅವರು ಒತ್ತಾಯಿಸಿದರು.

ಗಮನಕ್ಕೆ ಬಂದಿಲ್ಲ

ನಗರಸಭೆ ಕಚೇರಿ ಕಟ್ಟಡದ ಹಿಂಭಾಗದಲ್ಲಿ ಕಸ ಸುರಿದಿರುವುದು ಗಮನಕ್ಕೆ ಬಂದಿಲ್ಲ. ಅದನ್ನು ಸ್ವಚ್ಛಗೊಳಿಸಲು ಹಾಗೂ ನಗರಸಭೆಯ ಹಳೇ ವಾಹನಗಳನ್ನು ಹರಾಜು ಹಾಕಲು ಶೀಘ್ರವಾಗಿ ಕ್ರಮ ವಹಿಸಲಾಗುವುದು ಎಂದು ನಗರಸಭೆ ಆಯುಕ್ತ ಕೆ.ಪರಮೇಶಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT