ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಸೋಮವಾರ ಬೈಕ್ ಮತ್ತು ಟಿಪ್ಪರ್ ಮಧ್ಯೆ ಅಪಘಾತ ಸಂಭವಿಸಿ, ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ನವಲೆ ಗ್ರಾಮ ಮೋಹನ (40), ಕುಮಾರ (30) ಮೃತರು. ಸಂಜೆ 6 ಗಂಟೆ ಸಮಯದಲ್ಲಿ ಗ್ರಾಮದ ಶನೇಶ್ವರ ದೇಗುಲದ ಮುಂಭಾಗದಲ್ಲಿ ಅಪಘಾತ ನಡೆದಿದೆ.
ಬೈಕ್ನಲ್ಲಿದ್ದ ಮೋಹನ ಮತ್ತು ಕುಮಾರ ನವಲೆ ಗ್ರಾಮದಿಂದ ಲಕ್ಕವಳ್ಳಿ ಗ್ರಾಮದ ಮಾರ್ಗವಾಗಿ ಸಾಗುತ್ತಿದ್ದಾಗ ಎದುರಿಗೆ ಬಂದ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ನಲ್ಲಿದ್ದ ಯುವಕರ ದೇಹಗಳು ಛಿದ್ರವಾಗಿ ರಸ್ತೆಯಲ್ಲಿ ಬಿದ್ದಿವೆ.
ಪ್ರತಿಭಟನೆ: ಪೊಲೀಸ್ ಇಲಾಖೆಯ ಬೇಜಬ್ದಾರಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಸ್ಥಳದಲ್ಲಿಯೇ ರಸ್ತೆ ತಡೆದರು.
ಒಂದು ತಾಸಿಗೂ ಹೆಚ್ಚು ಸಮಯ ನಡೆದ ಪ್ರತಿಭಟನೆಯಿಂದಾಗಿ ಶಿವಮೊಗ್ಗ– ಲಕ್ಕವಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಪೊಲೀಸ್ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಗ್ರಾಮಸ್ಥರ ಮೇಲೆ ಲಘುಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು.
ಡಿವೈಎಎಸ್ಪಿ ರೇಣುಕಾ ಪ್ರಸಾದ್, ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಯೋಗೀಶ್, ಲಕ್ಕವಳ್ಳಿ ಠಾಣೆಯ ಇನ್ಸ್ಪೆಕ್ಟರ್ ರಘುನಾಥ್ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮಕೈಗೊಂಡರು.