ಚಿಕ್ಕಮಗಳೂರು: ಅನಸೂಯಾ ಜಯಂತಿ ಅಂಗವಾಗಿ ನಗರದಲ್ಲಿ ಮಂಗಳವಾರ ಸಂಕೀರ್ತನಾ ಯಾತ್ರೆ ವಿಜೃಂಭಣೆಯಿಂದ ನಡೆಯಿತು. ಮಹಿಳೆಯೊಬ್ಬರು ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯು ಬೋಳರಾಮೇಶ್ವರ ದೇಗುಲದಿಂದ ಹೊರಟು ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇಗಲ ಬಳಿ ಸಂಪನ್ನಗೊಂಡಿತು. ಜಿಲ್ಲೆ, ಹೊರ ಜಿಲ್ಲೆಗಳ ಮಹಿಳೆಯರು ಪಾಲ್ಗೊಂಡಿದ್ದರು.
ಗಿರಿಶ್ರೇಣಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ/ಸಂಸ್ಥೆಯ ದತ್ತ ಪೀಠದಲ್ಲಿ ಈ ಬಾರಿ ಅರ್ಚಕರು ಪೂಜೆ ಸಲ್ಲಿಸಿದರು. ಭಕ್ತರಿಗೆ ತೀರ್ಥ ನೀಡಿದರು.
‘ದತ್ತ ಪಾದುಕೆಗಳಿಗೆ ಷೋಡಶ ಉಪಚಾರ ಕೈಂಕರ್ಯ, ಅಭಿಷೇಕ ನೆರವೇರಿಸಲಾಯಿತು. ಪೂಜೆ ಸಲ್ಲಿಸಲಾ ಯಿತು’ ಎಂದು ಅರ್ಚಕ ಕೆ.ಶ್ರೀಧರ ‘ಪ್ರಜಾವಾಣಿ’ಗೆ ತಿಳಿಸಿದರು.
ಒಂದೇ ಬಣ್ಣ, ವಿನ್ಯಾಸದ ಸೀರೆ: ಹಲವು ಮಹಿಳೆಯರು ಕೇಸರಿ ಬಣ್ಣದ ಒಂದೇ ವಿನ್ಯಾಸದ ಸೀರೆ ಉಟ್ಟಿದ್ದರು.
‘ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸೀರೆ ವಿತರಿಸಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಕೊಟ್ಟಿಲ್ಲ’ ಎಂದು ಕಡೂರು ತಾಲ್ಲೂಕಿನ ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ರಸ್ತೆಯಲ್ಲಿ ಮೊಳೆ: ಗಿರಿಶ್ರೇಣಿ ಮಾರ್ಗದ ರಸ್ತೆ ತಿರುವುಗಳಲ್ಲಿ ಮೊಳೆಗಳನ್ನು ಹರಡಿ ವಿಧ್ವಂಸಕ ಕೃತ್ಯದ ಸಂಚು ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದರು.
‘ಗಿರಿಶ್ರೇಣಿ ರಸ್ತೆಯಲ್ಲಿ ಮೊಳೆಗಳು ಸಿಕ್ಕಿವೆ. ತನಿಖೆ ನಡೆಯಲಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.