ತರೀಕೆರೆ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕಳೆದ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಮೊಬೈಲ್ಗಳು ಕಳಪೆ ಗುಣ ಮಟ್ಟದ್ದಾಗಿರುತ್ತದೆ ಎಂದು ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಪೇಡರೇಷನ್ನ ಪ್ರಧಾನ ಕಾರ್ಯದರ್ಶಿಯಾದ ಬಿ.ಪಿ ಕಲಾ ಪ್ರತಿಭಟನೆಯ ಮೂಲಕ ತರೀಕೆರೆ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡದರು.
ಕಳಪೆ ಗುಣಮಟ್ಟದ ಮೊಬೈಲ್ಗಳಲ್ಲಿ ಮಾಹಿತಿ ಸಂಗ್ರಹ ಸೇರಿದಂತೆ ಮತ್ತಿತರೆ ಕೆಲಸ ನಿರ್ವಹಿಸುವುದು ಕಷ್ಟವಾಗಿರುತ್ತದೆ. ಇದರೊಂದಿಗೆ ಬೇರೆ ಇಲಾಖೆಯಾಗಿರುವ ಆರೋಗ್ಯ ಇಲಾಖೆಯ ಕಾರ್ಯಕ್ರಮದ ಆರೋಗ್ಯ ಸಮೀಕ್ಷೆಯನ್ನು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸಬೇಕಾಗಿರುತ್ತದೆ. ಇಲ್ಲವಾದರೆ ಸಮೀಕ್ಷೆ ಮಾಡದಿದ್ದಲ್ಲಿ ಸಸ್ಪೆಂಡ್ ಮಾಡುವುದಾಗಿ, ಗೌರವಧನ ಕಡಿತಗೊಳಿಸುವುದಾಗಿ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಇದು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಡೆಸಲಾಗುತ್ತಿರುವ ಮಾನಸಿಕ ದೌರ್ಜನ್ಯ ಮತ್ತು ಕಿರುಕುಳವಾಗಿರುತ್ತದೆ ಎಂದು ಆರೋಪಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಮೊಟ್ಟೆಗಳು ಕಳಪೆ ಮತ್ತು ಕಡಿಮೆ ಗಾತ್ರದಿಂದ ಕೂಡಿದೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಮೊಟ್ಟೆ ಖರೀದಿಯ ಜವಾಬ್ದಾರಿಯಿಂದ ಬಾಲ ವಿಕಾಸ ಸಂಸ್ಥೆಗೆ ನೀಡಬೇಕು, ಬಾಡಿಗೆ ಕಟ್ಟಡಗಳು ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಕಿ ಉಳಿದಿರುವ ಬಾಡಿಗೆ ಹಣವನ್ನು ಸರ್ಕಾರ ಬಿಡುಗಡೆಗೊಳಿಸಿಕೊಡಬೇಕು. ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಮೇಲ್ವಿಚಾರಕಿಯರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗಾವಣೆ ಮಾಡಬೇಕು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ, ಸರ್ಕಾರಕ್ಕೆ ಮನವಿ ಪತ್ರವನ್ನು ಕಳುಹಿಸಿ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಫೆಡರೇಷನ್ನ ಅಧ್ಯಕ್ಷೆ ಸವಿತಾ, ಕಾರ್ಯದರ್ಶಿ ನಳಿನಾ, ಉಪಾಧ್ಯಕ್ಷ ಮಲ್ಲಿಗ, ಖಜಾಂಚಿ ಎಚ್. ಸರಸ್ವತಿ, ಸಂಘಟನಾ ಕಾರ್ಯದರ್ಶಿ ರುದ್ರಮ್ಮ, ನಿರ್ದೇಶಕರಾದ ಶಾಂತಾಬಾಯಿ, ಸರಸ್ವತಿ, ಧನಲಕ್ಷ್ಮೀ, ಪಾರ್ವತಿ ಪ್ರೇಮಾ, ಶಿರೋಮಣಿ, ಶಶಿಕಲಾ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.