ಕಳಸ: ಇಲ್ಲಿಗೆ ಸಮೀಪದ ಸಂಸೆಯ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಮೂರು ಶಾಸನಗಳು ಪತ್ತೆಯಾಗಿವೆ.
ವಿಜಯನಗರ ಕಾಲದ ಸಾಮಂತರಾದ ಕಳಸ- ಕಾರ್ಕಳ ರಾಜ್ಯದ ಭೈರವರಸ ದೊರೆಗಳ ಕಾಲದಲ್ಲಿ ನಿರ್ಮಾಣವಾಗಿರುವ ಸಂಸೆ ಮೂರ್ನಾಡಿನ ಪ್ರಸಿದ್ಧ ಬಸದಿಯಲ್ಲಿ ಸಿಕ್ಕಿರುವ ಈ ಶಾಸನಗಳು ಐತಿಹಾಸಿಕ ಮಹತ್ವವನ್ನೂ ಪಡೆದಿವೆ.
ಈ ಪೈಕಿ ವರ್ಧಮಾನಸ್ವಾಮಿ ಪ್ರತಿಮೆಯ ಪಾದಪೀಠದಲ್ಲಿ ಶಾಸನವೊಂದಿದೆ. ಅದರ ಪ್ರಕಾರ ಈ ವಿಗ್ರಹವನ್ನು ಬೊಮ್ಮನಹಾಳಿ ಭಲಿಸೆಟರ ಮಗ ತಿಮಿಸೆಟಿ, ತಿಮಿಸೆಟಿಯ ಮಗ ಸಿಂಸನಗದ್ದೆಯ ಪದುಮಣ ಸೆಟಿ ಮಾಡಿಸಿದ ಬಗ್ಗೆ ಉಲ್ಲೇಶ ಇದೆ. ಈ ವಿಗ್ರಹವು 16ನೇ ಶತಮಾನದ ವಿಜಯನಗರ ಕಾಲದದ್ದೆಂದು ಪಾಂಡುರಂಗ ತಿಳಿಸಿದ್ದಾರೆ.
ಬಸದಿಯಲ್ಲಿ ಕ್ರಿ.ಶ. 1860 ಕಾಲದ ಎರಡು ಶಾಸನಗಳು ಪತ್ತೆಯಾಗಿದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ್ದೆಂದು ತಿಳಿದುಬಂದಿದೆ. ಶ್ರುತಸ್ಕಂದ ವಿಗ್ರಹದ ಪಾದಪೀಠದಲ್ಲಿ ಇರುವ ಶಾಸನದ ಪ್ರಕಾರ ಸಂಸೆಯ ಮೂರ್ನಾಡಿನ ವರದಯ್ಯ ಹೆಗಡೆ ಈ ಶ್ರುತಸ್ಕಂದ ವಿಗ್ರಹದ ಪಂಚಕಲ್ಯಾಣ ಮತ್ತು ಪ್ರತಿಷ್ಠಾಪನೆ ಮಾಡಿಸಿದ್ದಾರೆ.
ಬಸದಿಯಲ್ಲಿ ಇರುವ ಗಣಧರ ಪಾದುಕೆಯನ್ನೂ ಮೂರ್ನಾಡಿನ ವರದಯ್ಯ ಹೆಗ್ಗಡೆಯವರೇ ಮಾಡಿಸಿದ್ದಾರೆ ಎಂಬ ಉಲ್ಲೇಖವೂ ಆ ವಿಗ್ರಹದ ಪೀಠದಲ್ಲಿದೆ. ಈ ಶಾಸನಗಳ ಅಧ್ಯಯನಕ್ಕೆ ಬಸದಿಯ ಅರ್ಚಕರಾದ ವಿಶ್ವಸೇನ ಮತ್ತು ನಿತಿನ್ ಇಂದ್ರ ಸಹಕರಿಸಿದ್ದಾರೆ.
ವಿಶೇಷ ವಾಸ್ತುಶಿಲ್ಪದ ಸಂಸೆ ಬಸದಿಯ ಪ್ರಾಚೀನತೆ ಬಗ್ಗೆ ನಿಖರವಾದ ಅಧ್ಯಯನ ನಡೆಯುತ್ತಿದೆ. ಬಸದಿಯ ಮುಂಭಾಗದ ಸಿಂಹ ಕಠಾಂಜನ ಕೂಡ ಬಸದಿಯು ವಿಜಯನಗರ ಕಾಲಕ್ಕೆ ಸೇರಿದೆ ಎಂಬ ಪುರಾವೆ ಒದಗಿಸಿದೆ ಎಂದೂ ಸಂಶೋಧನಕಾರ ಎಚ್.ಆರ್.ಪಾಂಡುರಂಗ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.