ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್ಗಿರಿ ಪ್ರದೇಶದಲ್ಲಿ ಬೆಂಗಳೂರಿನ ವಕೀಲ ಶಂನಾದ್ ಬಷೀರ್ (43) ಎಂಬುವರ ಶವ ಗುರುವಾರ ಪತ್ತೆಯಾಗಿದೆ.
ಗಿರಿಶ್ರೇಣಿಯ ಮಾಣಿಕ್ಯಧಾರಾ ಬಳಿ ಪ್ರದೇಶದಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿದೆ. ಕಾರಿಗೆ ಬೀಗ ಹಾಕಿದ್ದು, ಚಾಲಕನ ಸೀಟಿನಲ್ಲಿ ಶವ ಸಿಕ್ಕಿದೆ.
ಇದೇ 3ರಂದು ಬೆಳಿಗ್ಗೆ ಬಷೀರ್ ಗಿರಿಗೆ ತೆರಳಿದ್ದರು. ತಮ್ಮ ಕಾರಿನಲ್ಲಿ ವಾಪಸ್ ಬರುವುದಾಗಿ ಹೇಳಿ ಚಾಲಕನನ್ನು ಗಿರಿಯಿಂದ ವಾಪಸ್ ಕಳಿಸಿದ್ದರು ಎಂದು ಕುಟುಂಬದವರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಿರಿಶ್ರೇಣಿ ಪ್ರದೇಶದಲ್ಲಿ ಇಡೀ ದಿನ ಬಷೀರ್ಗಾಗಿ ಹುಡುಕಾಟ ನಡೆಸಲಾಯಿತು. ಕಾರಿನಲ್ಲಿ ಶವ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ಶುಕ್ರವಾರ ಬೆಳಿಗ್ಗೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಇದೇ 3ರಿಂದ ಬಷೀರ್ ಮನೆಯವರ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಈ ಬಗ್ಗೆ ಅವರ ಸಹೋದರ ದೂರು ದಾಖಲಿಸಿದ್ದರು. ಸಾವಿಗೆ ಕಾರಣ ಗೊತ್ತಾಗಿಲ್ಲ. ಇದರ ಹಿಂದೆ ಯಾರ ಕೈವಾಡದ ಬಗ್ಗೆ ಯಾವುದೇ ಸಾಕ್ಷ್ಯ ಈವರೆಗೆ ಕಾರಿನ ಬಳಿ ಅಥವಾ ಕಾರಿನಲ್ಲಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.