ಬಾಳೆಹೊನ್ನೂರು: ‘ಉಳುವವನೇ ಭೂಮಿಯ ಒಡೆಯ ಎಂಬ ನೀತಿಯು, ಈಗ ‘ಬಂಡವಾಳ ಹೂಡಿದವನೇ ಭೂಮಿಯ ಒಡೆಯ’ ಎಂಬಂತಾಗಿದೆ. ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಮುಗ್ದ ಯುವಕರನ್ನು ಸಾಮಾಜಿಕ ಹೋರಾಟಗಾರರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಆಳುವ ಸರ್ಕಾರಗಳು ನಡೆಸುತ್ತಿರುವುದು ವಿಷಾದನೀಯ’ ಎಂದು ಸಿಪಿಐಎಂ.ಎಲ್ನ ಶೇಖರ್ ಹೇಳಿದರು.
ಪಟ್ಟಣದ ವಿದ್ಯಾಗಣಪತಿ ಸಮುದಾಯಭವನದಲ್ಲಿ ಸಿಪಿಐ(ಎಂ.ಎಲ್.) ರೆಡ್ ಸ್ಟಾರ್ ಬಣ ಆಯೋಜಿಸಿದ್ದ ನರಸಿಂಹರಾಜಪುರ ತಾಲ್ಲೂಕಿನ 3ನೇ ತಾಲ್ಲೂಕು ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ನೂತನ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ಹೋರಾಡೋಣ, ಕಾರ್ಪೋರೇಟ್ ವ್ಯವಸ್ಥೆಯನ್ನು ಕಿತ್ತೋಗೆಯೋಣ, ಎಲ್ಲರೂ ಸೇರಿ ಹಸಿವು, ಬಡತನ ನಿರುದ್ಯೋಗ ಇಲ್ಲದ ಸಮಾಜ ನಿರ್ಮಿಸಲು ಮುಂದಾಗೋಣ’ ಎಂದರು.
ನೂತನ ತಾಲ್ಲೂಕು ಸಮಿತಿ ರಚಿಸಿ 15 ಜನರನ್ನು ಸದಸ್ಯರನ್ನು ಆಯ್ಕೆ ಮಾಡಲಾಯಿತು.
ತಾಲ್ಲೂಕು ಕಾರ್ಯದರ್ಶಿ ಉಮೇಶ್, ಹರೀಶ್, ಪ್ರಸಾದ್, ಜೀವನ್, ರೆಡ್ ಸ್ಟಾರ್ ಜಿಲ್ಲಾ ಸಮಿತಿ ಸದಸ್ಯ ಬಿ.ಆರ್.ಸಂದೀಪ್, ಪುಟ್ಟಸ್ವಾಮಿ, ನಾಗೇಶ್ ಇದ್ದರು.