ಕಡೂರು:ರಕ್ಷಿತಾ ಕುಟುಂಬಕ್ಕೆ ನಿವೇಶನ ನೀಡಲು ನಿರ್ದೇಶನ ನೀಡಲಾಗಿದೆ. ಅಲ್ಲಿ ವೈಯುಕ್ತಿಕವಾಗಿ ಮನೆ ನಿರ್ಮಿಸಿ ಕೊಡುತ್ತೇನೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.
ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ರಕ್ಷಿತಾ ಬಾಯಿಯ ಸೋಮನಹಳ್ಳಿ ತಾಂಡ್ಯದ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬ ದವರನ್ನು ಅವರು ಸಂತೈಸಿದರು.
ರಕ್ಷಿತಾಳ ತಂದೆ ಶೇಖರ್ ನಾಯ್ಕ ಮತ್ತು ತಾಯಿ ಲಕ್ಷ್ಮೀ ಬಾಯಿ ಅವರ ಜೊತೆ ಮಾತನಾಡಿದ ಅವರು, ಮಗಳ ಸಾವಿನ ನೋವಿನಲ್ಲೂ ಅಂಗಾಂಗ ದಾನ ಮಾಡಿ 9 ಜನರಿಗೆ ಪುನರ್ಜನ್ಮ ಕೊಟ್ಟ ನಿಮ್ಮ ದೊಡ್ಡತನಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಿಮ್ಮ ನೋವಿನಲ್ಲಿ ನಾವೂ ಭಾಗಿಗಳಾಗಿದ್ದೇವೆ ಎಂದು ಸಂತೈಸಿ ವೈಯುಕ್ತಿಕವಾಗಿ ₹2 ಲಕ್ಷ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದಿಂದ ಬರುವ ಪರಿಹಾರಧನ ನೀಡಲಿದ್ದಾರೆ. ರಕ್ಷಿತಾ ಬಾಯಿ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಹಾಗೂ ವೃತ್ತವೊಂದಕ್ಕೆ ಹೆಸರಿಡುವ ಬೇಡಿಕೆ ಇದೆ.ಬಂಜಾರ ಸಮುದಾಯ ಭವನಕ್ಕೆ ಆಕೆಯ ಹೆಸರನ್ನು ಇಡುವ ಕುರಿತು ಆ ಸಮುದಾಯ ಚಿಂತನೆ ನಡೆಸಲಿ ಎಂದರು.
ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ಮುಖಂಡರಾದ ಟಿ.ಆರ್.ಲಕ್ಕಪ್ಪ, ಸತೀಶ್ ನಾಯ್ಕ, ಕುಮಾರ ನಾಯ್ಕ, ಜಿಗಣೇಹಳ್ಳಿ ನೀಲಕಂಠಪ್ಪ, ಬಿಜೆಪಿ ಮಂಡಲ ವಕ್ತಾರ ಶಾಮಿಯಾನ ಚಂದ್ರು, ವಕೀಲ ಕೆ.ಎನ್.ಬೊಮ್ಮಣ್ಣ ಇದ್ದರು.