ಬೆಳ್ತಂಗಡಿ: ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ, ಬಿಲ್ಲವ ಮಹಿಳಾ ವೇದಿಕೆ ಮತ್ತು ತಾಲ್ಲೂಕು ಯುವ ಬಿಲ್ಲವ ವೇದಿಕೆ ಇವುಗಳ ಸಹಭಾಗಿತ್ವದಲ್ಲಿ ಶ್ರೀಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಿಇಟಿ ಮತ್ತು ನೀಟ್ ಪರೀಕ್ಷೆಯ ತರಬೇತಿ ಕಾರ್ಯಕ್ರಮದ ಸಮಾರೋಪಗೊಂಡಿತು.
ಶ್ರೀ ಗುರುದೇವ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ‘ಉನ್ನತ ಶಿಕ್ಷಣಕ್ಕೆ ಇಂತಹ ತರಬೇತಿ ಅಗತ್ಯವಿದೆ. ಮುಂದಿನ ವರ್ಷವು ಗುರುದೇವ ಕಾಲೇಜು ವತಿಯಿಂದ ತರಬೇತಿ ನಡೆಸಲಾಗುವುದು. ಇಲ್ಲಿ ತರಬೇತಿ ಪಡೆದು ಅತೀ ಹೆಚ್ಚು ಅಂಕ ಗಳಿಸಿದ ಮೂರು ಮಂದಿಯನ್ನು ಗೌರವಿಸಲಾಗುವುದು’ ಎಂದರು
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಮಾತನಾಡಿ, ‘ಸಂಘವು ಈ ತರಬೇತಿಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ₹ 35 ಸಾವಿರ ವಿನಿಯೋಗ ಮಾಡಿದೆ’ ಎಂದರು.
ಉಪನ್ಯಾಸಕ ಗುಣಪ್ರಸಾದ್, ಪ್ರಾಂಶುಪಾಲ ಸುಕೇಶ್ ಕುಮಾರ್ ಇದ್ದರು. ಸಂಘದ ಶೈಕ್ಷಣಿಕ ಸಮಿತಿ ಸಂಚಾಲಕ ಲಕ್ಷ್ಮಣ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಭುವಿತಾ ಮತ್ತು ಅಶ್ವಿತಾ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಮಾಯಾ ಭಟ್ ವಂದಿಸಿದರು.