ಪ್ರಮುಖ ವಾಣಿಜ್ಯ ಬೆಳೆಯಾಗಿ ರಾಜ್ಯದಲ್ಲಿ ಗುರುತಿಸಲಾಗಿರುವ ಅಡಿಕೆ ರಾಜ್ಯದ ಮಲೆನಾಡಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬಯಲುಸೀಮೆಯ ದಾವಣಗೆರೆ, ತುಮಕೂರು, ಕರಾವಳಿಯ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲೆಕ್ಕ ಹಾಕಿದರೆ, ಲಕ್ಷಾಂತರ ಕುಟುಂಬಗಳ ಅವಲಂಬನೆಯ ಉದ್ಯೋಗವಾಗಿ ಬೆಳೆದು ಬಂದಿದೆ. ತನ್ನನ್ನು ನಂಬಿ ಬದುಕುವ ಲಕ್ಷಾಂತರ ಕುಟುಂಬಗಳ ಕಣ್ಣುಗಳಲ್ಲಿ ದೀಪಾವಳಿ ಕಾಣಿಸುವ ಅಡಿಕೆ, ಮನೆಯಲ್ಲಿ ಮದುವೆ ಮಾಡುವ, ಮನೆಕಟ್ಟುವ, ವಾಹನ ಕೊಳ್ಳುವ, ಮಕ್ಕಳ ಓದಿಗೆ ಸುಲಭವಾಗಿ ಸಾಲ ಗಿಟ್ಟಿಸಿಕೊಳ್ಳುವ, ಆಭರಣ ಧರಿಸುವ ಕನಸಿಗೆ ನೀರೆರೆವ ಬೆಳೆಯೂ ಹೌದು.