ಚಿಕ್ಕಮಗಳೂರು: ತಾಲ್ಲೂಕಿನ ಕರ್ತಿಕೆರೆ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಓಂಕಾರಪ್ಪ ನಗರದ ತಾಲ್ಲೂಕು ಕಚೇರಿಯಲ್ಲಿ ₹ 15,000 ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಪೊಲೀಸರು ಗುರುವಾರ ಬಂಧಿಸಿದ್ದಾರೆ.
‘94 –ಸಿ’ನಲ್ಲಿ ಮನೆ ಸಕ್ರಮಗೊಳಿಸಲು ಕೆ.ಟಿ.ದಶರಥರಾಜ್ ಅರಸ್ ಅವರಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಆರೋಪಿಯಿಂದ ಲಂಚದ ಹಣವನ್ನು ವಶ ವಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ನಾಗೇಶ್ಶೆಟ್ಟಿ, ಪೊಲೀಸ್ ಇನ್ಸ್ಪೆಕ್ಟರ್ ಕೆ.ಕೃಷ್ಣಮೂರ್ತಿ, ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ.
ದಶರಥರಾಜ್ ಅರಸ್ ಅವರು ಕರ್ತಿಕೆರೆ ಗ್ರಾಮದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಮನೆಯನ್ನು ಕಲಂ 94 ‘ಸಿ’ ಅಕ್ರಮ–ಸಕ್ರಮದಡಿ ಮಂಜೂರು ಮಾಡುವಂತೆ 2015ರಲ್ಲಿ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕಾರ್ಯಕ್ಕೆ ಗ್ರಾಮ ಲೆಕ್ಕಾಧಿಕಾರಿ ಓಂಕಾರಪ್ಪ ₹ 15,000 ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ನಗರದ ಎಸಿಬಿ ಠಾಣೆಯಲ್ಲಿ ದಶರಥರಾಜ್ ದೂರು ದಾಖಲಿಸಿದ್ದರು.