ಚಿಕ್ಕಮಗಳೂರು: ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ತಾಲ್ಲೂಕಿನ ನಂದೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಟಿ.ಪರಮೇಶ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಎಸಿಬಿ ಅಧಿಕಾರಿಗಳು ಪಂಚಾಯಿತಿ ಕಚೇರಿಗೆ ದಾಳಿ ಮಾಡಿ ಬಂಧಿಸಿದ್ದಾರೆ. ನಗದು ವಶಪಡಿಸಿಕೊಂಡಿದ್ದಾರೆ.
‘ಗುತ್ತಿಗೆದಾರ ಎನ್.ಜಿ.ಗೌತಮ್ ಎಂಬುವರು ಗ್ರಾಮ ಪಂಚಾಯಿತಿಗೆ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಕಾಮಗಾರಿಗೆ ₹ 6 ಲಕ್ಷದ ಸಾಮಗ್ರಿ ಪೂರೈಸಿದ್ದರು. ಬಿಲ್ ಪಾವತಿಗೆ ₹ 34 ಸಾವಿರ ಲಂಚಕ್ಕೆ ಇವರಿಬ್ಬರು ಬೇಡಿಕೆ ಇಟ್ಟು ₹ 10 ಸಾವಿರ ಪಡೆದಿದ್ದರು. ಉಳಿಕೆ 24 ಸಾವಿರ ಶುಕ್ರವಾರ ಕೊಡುವಂತೆ ತಿಳಿಸಿದ್ದರು. ಅದರಂತೆ ಗೌತಮ್ ಶುಕ್ರವಾರ ಉಳಿಕೆ ಹಣ ನೀಡಿದ್ದಾರೆ. ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಗೌತಮ್ ಅವರು ಎಸಿಬಿಗೆ ದೂರು ನೀಡಿದ್ದರು.