ಬಾಳೆಹೊನ್ನೂರು: ಪಟ್ಟಣದ ಬಸ್ ನಿಲ್ದಾಣದ ಕೆಸರು ಗುಂಡಿಗೆ ಇಳಿದ ಬಸ್ನ ಆಕ್ಸಿಲ್ ತುಂಡಾದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.
ಪಟ್ಟಣದ ಬಸ್ ನಿಲ್ದಾಣದ ಅರ್ಧ ಕಾಂಕ್ರೀಟ್ ಹಾಗೂ ಉಳಿದರ್ಧ ಹದಗೆಟ್ಟ ಡಾಂಬರಿನಿಂದ ಕೂಡಿದ್ದು, ಬಸ್ಗಳು ಹಾಗೂ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದರೂ ಇಲ್ಲಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಶುಕ್ರವಾರ ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಿಲ್ದಾಣದ ಒಳಗೆ ಬಂದು ನಿಲ್ಲಿಸಲು ಮುಂದಾಗುತ್ತಿದ್ದಂತೆ ಕೆಸರಿನ ಹೊಂಡದಲ್ಲಿ ಚಕ್ರಗಳು ದಿಢೀರ್ ಹೂತು ಹೋದವು. ಬಸ್ ಅನ್ನು ಮೇಲೆ ತರಲು ಯತ್ನಿಸುತ್ತಿದ್ದ ವೇಳೆ ಅದರ ಆಕ್ಸಿಲ್ ತುಂಡಾಗಿ ಮುಂದೆ ಚಲಿಸದಾಯಿತು. ಇದರಿಂದಾಗಿ ಶೃಂಗೇರಿಗೆ ಕಡೆಗೆ ಹೊರಟಿದ್ದ ಪ್ರಯಾಣಿಕರನ್ನು ಇಲ್ಲಿಯೇ ಇಳಿಸಿ ಬೇರೆ ಬಸ್ ಗಳ ಮೂಲಕ ಕಳುಹಿಸಲಾಯಿತು.
ಇಲ್ಲಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ಕೆಸರಿನ ಹೊಂಡಕ್ಕೆ ಕನಿಷ್ಟ ಮರಳು ಹಾಕುವ ಯತ್ನವನ್ನೂ ಮಾಡುತ್ತಿಲ್ಲ. ನಿತ್ಯ ಬಸ್ ಗಳನ್ನು ಎಲ್ಲಿ ನಿಲ್ಲಿಸುವುದು ಎಂಬುವುದೇ ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಸ್ ಚಾಲಕರು.