ಭದ್ರಾವತಿ: ಇಲ್ಲೊಂದು ಮದುವೆ ಸಂಭ್ರಮದಲ್ಲಿ ಮತದಾನ ಜಾಗೃತಿಯ ಸಂದೇಶದ ಪ್ರಚಾರ ಗಮನಸೆಳೆದಿದೆ.
ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ಗುರುವಾರ ಸಪ್ತಪದಿ ತುಳಿಯಲಿರುವ ಎಸ್. ರಾಧಾ ಹಾಗೂ ಪಿ.ಎಸ್. ಕೃಷ್ಣಮೂರ್ತಿ ಅವರ ಆರತಕ್ಷತೆ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ಹಾಕಿದ್ದ ಜಾಗೃತಿಯ ಫಲಕ ನೋಡುಗರ ಮನಗೆದ್ದಿದೆ.
ಆರತಕ್ಷತೆಗೆ ಸ್ವಾಗತ ಕೋರುವ ಫಲಕದ ಪಕ್ಕದಲ್ಲಿ ರಾಜ್ಯ ಚುನಾವಣಾ ಆಯೋಗದ ಪ್ರಚಾರ ರಾಯಭಾರಿ ರಾಹುಲ್ ದ್ರಾವಿಡ್ ಅವರ ಫಲಕ ಇಡಲಾಗಿದ್ದು, ಹಲವು ಜಾಗೃತಿ ಘೋಷಣೆಗಳನ್ನು ಹಾಕಲಾಗಿದೆ.
ಕಲ್ಯಾಣ ಮಂಟಪದ ಒಳಗೆ ‘ಮತದಾನ ಶ್ರೇಷ್ಠ ದಾನ’, ‘ದಾನಕ್ಕಿಂತ ಶ್ರೇಷ್ಠ ಮತದಾನ’, ‘ಮತದಾನ ಪ್ರಜೆಯ ಹಕ್ಕು’, ‘ಪ್ರಜೆಗಳಿಂದ ಪ್ರಜೆಗಳಿಗೆ ಸಿಗುವ ಹಕ್ಕು ಮತದಾನ’ ಎಂದು ಸಾರುವ ಫಲಕಗಳಿದ್ದವು.